ಪಂಪಭಾರತ ಆಶ್ವಾಸ ೫ ಪದ್ಯಗಳು ೧೧ರಿಂದ ೧೯

 

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ ವಿಜೃಂಭಮಾಣ ನವ ನಳಿನ ಪರಿಕರಾಕೃಷ್ಟ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ ವಿರಹಿ ಜನನಿಚಯ ನಿಚಿತ ಮಾನಸೋನ್ಮತ್ತ ಕಾಮಿನೀ ಗಂಡೂಷ ಸಿಂಧು ಸೇಕ ಪುಳಕಿತ ವಕುಳ ಮುಕುಳ ವಿದಳಿತ ಮನೋಹರಾಶೋಕಲತಾ ರಮಣೀ ರಮಣೀಯ ನೂಪುರರವ ರಮ್ಯಮನವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನುತ್ಫುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲೋಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನೆಯ್ದೆವಂದು-

ಅಂತು ಆ ಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟ ಎಳವಾೞೆಯಂತೆ ಸುರತ ಮಕರಧ್ವಜನೊಳ್‌ ಆದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳ್‌; ಅತ್ತ ಮನುಜ ಮನೋಜನುಂ ಮದನಪರಿತಾಪಕ್ಕೆ ಆಱದೆ ಉಮ್ಮಳಿಸಿ, ಮಧುಮಥನನ ಕಣ್ಣಂ ಬಂಚಿಸಿ, ವಿಜೃಂಭಮಾಣ ನವ ನಳಿನ ಪರಿಕರ ಆಕೃಷ್ಟ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ (ಇರಿಸಲಾದ) ವಿರಹಿ ಜನನಿಚಯ(ಗುಂಪು) ನಿಚಿತ (ವ್ಯಾಪ್ತವಾದ), ಮಾನಸ ಉನ್ಮತ್ತ ಕಾಮಿನೀ ಗಂಡೂಷ ಸಿಂಧು ಸೇಕ ಪುಳಕಿತ ವಕುಳ ಮುಕುಳ, ವಿದಳಿತ ಮನೋಹರ ಅಶೋಕ ಲತಾ ರಮಣೀ ರಮಣೀಯ ನೂಪುರರವ ರಮ್ಯಮನ್‌, ಅವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನ್‌, ಉತ್ಫುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲ ಉಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನ್‌ ಎಯ್ದೆವಂದು

ಹಾಗೆ ಆ ಬಾಲೆಯು ಅರ್ಜುನನಲ್ಲಿ ತನಗುಂಟಾದ ಉತ್ಕಟಮೋಹದಿಂದ,  ಸುಡುಬಿಸಿ ಹುಡಿಮಣ್ಣಿನಲ್ಲಿ ಎಸೆದ ಬಾಳೆ ಮೀನಿನಂತೆ ಒದ್ದಾಡುತ್ತಿದ್ದಳು. ಅತ್ತ ಮನುಜಮನೋಜನೂ (ಅರ್ಜುನ) ಕಾಮನ ಕಾಟವನ್ನು ತಡೆದುಕೊಳ್ಳಲಾಗದೆ ಸಂಕಟಪಡುತ್ತಾ, ಶ್ರೀಕೃಷ್ಣನ ಕಣ್ಣು ತಪ್ಪಿಸಿ (ಉದ್ಯಾನವನದತ್ತ) ಹೊರಟನು; (ಅಲ್ಲಿ) ಜೇನು ಹುಳಗಳು ಹೊಸತಾಗಿ ಅರಳಿದ್ದ ತಾವರೆಗಳ ಗುಂಪನ್ನು ಮುತ್ತಿಕೊಂಡಿದ್ದವು;  ಮರಳು ಹರಡಿಕೊಂಡಿದ್ದ ಆ ಪರಿಸರದಲ್ಲಿ ವಿರಹಿ ಜನರು (ಅಲೆದಾಡುತ್ತಿದ್ದರು); ಅಲ್ಲಿ, ಮದವೇರಿದ ಹೆಣ್ಣುಗಳು ಮುಕ್ಕುಳಿಸಿ ಉಗಿದ ಮದಿರೆಯ ತುಂತುರುಗಳಿಂದ ರೋಮಾಂಚನಗೊಂಡ ಬಕುಳದ ಮೊಗ್ಗುಗಳಿದ್ದವು; ಅಶೋಕ ಲತೆ ಎಂಬ ರಮಣಿಯ ನೂಪುರಗಳ ಮಧುರವಾದ ನಾದವಿತ್ತು; ದಟ್ಟವಾಗಿ ಹರಡಿ ಬಿದ್ದಿದ್ದ ಹೂಗಳ ಪರಾಗದಿಂದಾಗಿ ಅಲ್ಲಿನ ನೆಲವು ಮರಳಿನ ಬಣ್ಣವನ್ನು ತಳೆದಿತ್ತು, ಅರಳಿ ನಿಂತ ಚಿಗುರುಗಳ ಲೀಲೆ ಇತ್ತು; (ಹೀಗೆ) ಮದಿಸಿದ ಕೋಗಿಲೆಗಳ ಕೂಗಿನಿಂದ, ಮೋಡ ಕವಿದ ವಾತಾವರಣದಿಂದ  ಉಲ್ಲಾಸಗೊಂಡ ಉದ್ದವಾದ ಆ ದಿನದಂದು (ಅರ್ಜುನನು)  ವನವನ್ನು ಸಮೀಪಿಸಿ

(ಟಿಪ್ಪಣಿ: ಇಲ್ಲಿ ʼಅಶೋಕ ಲತಾ ರಮಣೀ ರಮಣೀಯ ನೂಪುರರವ ರಮ್ಯಮನ್‌ʼ ಎಂಬ ಮಾತಿನ ಅರ್ಥವೇನು? ಶಬ್ದಗಳನ್ನೇ ಆಧರಿಸಿ ಹೇಳುವುದಾದರೆ ʼ ಅಶೋಕ ಲತೆ ಎಂಬ ರಮಣಿಯ ನೂಪುರಗಳ ಮಧುರವಾದ ನಾದವಿತ್ತುʼ ಎನ್ನಬೇಕು. ಕವಿಯ ಪ್ರಕಾರ ಅಶೋಕ ಎಂಬುದು ಒಂದು ಬಳ್ಳಿ. ಕವಿ ಆ ಬಳ್ಳಿಯನ್ನು ಹೆಣ್ಣಿಗೆ ಹೋಲಿಸಿದ್ದಾನೆ. ಆದರೆ ಆ ಬಳ್ಳಿಗೆ ʼಕಾಲ್ಕಡಗʼ ಎಲ್ಲಿಂದ ಬಂತು? ಅದರ ʼಮಧುರವಾದ ನಾದʼ  ಎಂದರೆ ಏನು? ಇಲ್ಲಿ ಕೆಲವು ಸೂಚಿತ ಪಾಠಗಳಿವೆ. ಈ ಪಾಠಗಳಿಂದಾಗಿ ಶಬ್ದಗಳು ಅರ್ಥವಾಗುತ್ತವೆಯಾದರೂ, ಸುಸಂಬದ್ಧವಾದ ಒಂದು ಒಟ್ಟಂದದ ಕಲ್ಪನೆ ಮೂಡಿ ಬರುವುದಿಲ್ಲ.)

ಚಂ|| ಬಿರಿದಲರೊಳ್ ತೆಱಂಬೊಳೆವ ತುಂಬಿ ತಳಿರ್ತೆಳಮಾವು ಮಾವಿನಂ

ಕುರಮನೆ ಕರ್ಚಿ ಬಿಚ್ಚೞಿಪ ಕೋಗಿಲೆ ಕಂಪನವುಂಕಿ ಪೊತ್ತು ನಿ|

ತ್ತರಿಪೆಲರೆಂಬಿವೇವುವೊ ಮದೀಯ ಮನೋಗತ ಕಾಮ ರಾಗ ಸಾ

ಗರದೊದವಿಂಗೆ ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ|| ೧೧||

ಬಿರಿದ ಅಲರೊಳ್ ತೆಱಂಬೊಳೆವ ತುಂಬಿ, ತಳಿರ್ತ ಎಳಮಾವು, ಮಾವಿನ ಅಂಕುರಮನೆ ಕರ್ಚಿ ಬಿಚ್ಚೞಿಪ ಕೋಗಿಲೆ, ಕಂಪನ್‌ ಅವುಂಕಿ ಪೊತ್ತು ನಿತ್ತರಿಪ ಎರಲ್ ಎಂಬಿವು ಏವುವೊ? ಮದೀಯ ಮನೋಗತ ಕಾಮ ರಾಗ ಸಾಗರದ ಒದವಿಂಗೆ ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ?

ಅರಳಿದ ಹೂಗಳಲ್ಲಿ ತೆರತೆರನಾಗಿ ಹೊಳೆಯುವ ದುಂಬಿಗಳು, ಚಿಗುರಿ ನಿಂತ ಎಳೆಯ ಮಾವಿನಮರ, ಮಾವಿನ ಚಿಗುರನ್ನು ಕಚ್ಚಿ (ನೆಲದ ಮೇಲೆಲ್ಲ) ಹರಡುವ ಕೋಗಿಲೆ,  ಪರಿಮಳವನ್ನು ಅವುಚಿ ಹಿಡಿದು, ಹೊತ್ತು ದಾಟಿಸುವ ಗಾಳಿ – ಇವುಗಳೆಲ್ಲ ಏನು ತಾನೇ ಮಾಡಿಯಾವು? ನನ್ನ ಮನಸ್ಸಿನಲ್ಲಿರುವ ಕಾಮಪ್ರೇಮಗಳ ಕಡಲು ಉಕ್ಕಬೇಕೆಂದರೆ ಆ ನಲ್ಲೆಯ ನೋಟವೆಂಬ ಬೆಳದಿಂಗಳೊಂದೇ ಸಾಕಲ್ಲವೇ?

ವ|| ಎನುತ್ತುಂ ಬಂದು ಬಿರಿದ ಬಿರಿಮುಗುಳ್ಗಳೊಳೆಱಗಿ ತುಱುಗಿದಶೋಕಲತೆಯನೞ್ಕರ್ತು ನೋಡಿ-

ಎನುತ್ತುಂ ಬಂದು, ಬಿರಿದ ಬಿರಿಮುಗುಳ್ಗಳೊಳ್‌ ಎಱಗಿ ತುಱುಗಿದ ಅಶೋಕಲತೆಯನ್‌ ಅೞ್ಕರ್ತು ನೋಡಿ,

ಎನ್ನುತ್ತಾ ಬಂದು, ಬಿರಿದ ಮೊಗ್ಗುಗಳು ತುಂಬಿಕೊಂಡ ಅಶೋಕಲತೆಯನ್ನು ಪ್ರೀತಿಯಿಂದ ನೋಡಿ,

ಚಂ|| ಅಲರಲರ್ಗಣ್ ಮುಗುಳ್‌ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ

ಗೊಲೆ ಮೊಲೆ ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್ ಕುಡಿ ತೋಳ್ ನಯಂ ನಯಂ|

ನೆಲೆ ನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪೆಱತಲ್ಲಿದೆಂತೊ ಕೋ

ಮಲಲತೆ ಪೇೞಿಮೆನ್ನಿನಿಯಳಂ ಮರೆಗೊಂಡುದೊ ಸೂರೆಗೊಂಡುದೋ|| ೧೨||

ಅಲರ್‌-ಅಲರ್ಗಣ್; ಮುಗುಳ್‌-ನಗೆ; ಮಡಲ್-ತೊಡೆ; ತುಂಬಿ-ಕುರುಳ್; ತಳಿರ್-ತಳಂ; ಗೊಲೆ-ಮೊಲೆ; ಕೆಂಪು-ಕೆಂಪು; ಕೊನೆ-ಸೆಳ್ಳುಗುರ್ಗಳ್; ಕುಡಿ-ತೋಳ್; ನಯಂ-ನಯಂ; ನೆಲೆ-ನೆಲೆ; ಭಂಗಿ-ಭಂಗಿ; ಪದವಣ್- ಬೆಳರ್ವಾಯ್ ಪೆಱತಲ್ಲ ಇದೆಂತೊ ಕೋಮಲಲತೆ ಪೇೞಿಂ ಎನ್ನ ಇನಿಯಳಂ ಮರೆಗೊಂಡುದೊ ಸೂರೆಗೊಂಡುದೋ?

(ಇಲ್ಲಿ ಅರ್ಜುನ ತನ್ನೆದುರಿನ ಬಳುಕುವ ಬಳ್ಳಿಗೂ ತನ್ನ ನಲ್ಲೆಗೂ ಇರುವ ಹೋಲಿಕೆಗಳನ್ನು ಎತ್ತಿ ಹೇಳುತ್ತಿದ್ದಾನೆ).

(ಬಳ್ಳಿಯ)ಹೂವು – (ನಲ್ಲೆಯ) ಹೂವಿನಂಥ ಕಣ್ಣು; ಮೊಗ್ಗು – ನಗು; ರೆಂಬೆ – ತೊಡೆ; ತುಂಬಿ – ಗುಂಗುರು ಕೂದಲು; ಚಿಗುರು – ಅಂಗೈ; (ಮೊಗ್ಗಿನ) ಗೊಂಚಲು – ಮೊಲೆ; ಕೆಂಪು – ಕೆಂಪು; ಎಳೆಯ ಕವಲುಗಳು – ಮೆದುವಾದ ಉಗುರುಗಳು;  ಕುಡಿ – ತೋಳುಗಳು; ನಯ – ನಯ; ನೆಲೆ – ನೆಲೆ; ಭಂಗಿ – ಭಂಗಿ; ಹದವಾದ ಹಣ್ಣುಗಳು – ಹೊಳೆಯುವ ತುಟಿಗಳು; (ಇವೆಲ್ಲವನ್ನೂ ಕಂಡಾಗ) ಈ ಕೋಮಲವಾದ ಬಳ್ಳಿಯು ತನ್ನೊಳಗೆ ನನ್ನ ನಲ್ಲೆಯನ್ನು ಮರೆಮಾಡಿ ಇಟ್ಟುಕೊಂಡಿದೆಯೋ ಅಥವಾ ಅವಳನ್ನೇ ಸೂರೆ ಹೊಡೆದು ತಾನು ರೂಪುಗೊಂಡಿದೆಯೋ ಹೇಳಿರಿ!

 

ವ|| ಎಂದು ಕಿಱಿದಾನುಂ ಬೇಗಮಱೆಮರುಳಾದಂತಾ ಲತೆಯೊಳ್ ಪೞಿಗಾಳೆಗಂಗಾದಿ ಬರೆವರೆ ಕಾಮದೇವನಿಮ್ಮಾವಿನ ನನೆಯನಂಬುಗಳುಮನವಱ ಬಲ್ಮಿಡಿಯನೆ ಮಿಟ್ಟೆಯುಮಂ ಮಾಡಿ ತನ್ನನೇಸಾಡಿ ಕಾಡೆ-

ಎಂದು ಕಿಱಿದಾನುಂ ಬೇಗಂ ಅಱೆಮರುಳಾದಂತೆ ಆ ಲತೆಯೊಳ್ ಪೞಿಗಾಳೆಗಂ ಕಾದಿ ಬರೆವರೆ, ಕಾಮದೇವನ್‌ ಇಮ್ಮಾವಿನ ನನೆಯನ್‌ ಅಂಬುಗಳುಮನ್‌, ಅವಱ ಬಲ್ಮಿಡಿಯನೆ ಮಿಟ್ಟೆಯುಮಂ ಮಾಡಿ, ತನ್ನನ್‌ ಏಸಾಡಿ ಕಾಡೆ-

ಎಂದು ಸ್ವಲ್ಪ ಹೊತ್ತು ಅರೆಹುಚ್ಚನಂತೆ ಆ ಬಳ್ಳಿಯೊಂದಿಗೆ ಬೈಗುಳದ ಯುದ್ಧಕ್ಕಿಳಿದನು! (ನಂತರ) ಮುಂದುವರಿದು ಬರುತ್ತಿರಲು, ಕಾಮದೇವನು ಸಿಹಿಮಾವಿನ ಮೊಗ್ಗನ್ನು ಬಾಣವಾಗಿಸಿ, ಅದರ ದೊಡ್ಡ ಮಿಡಿಯನ್ನು ಮಣ್ಣಿನ ಗೋಲಿಯಾಗಿಸಿ ತನ್ನ ಮೇಲೆ ಪ್ರಯೋಗ ಮಾಡಿ ಹಿಂಸಿಸಲು

ಚಂ|| ಅಸಿಯಳನೊಲ್ಗುಮೊಲ್ಲನಣಮೆನ್ನದೆ ರೂಪನೆ ನೋಡಿ ಕೂಡಲಾ

ಟಿಸಿ ಪರಿದೆಯ್ದಿ ಪತ್ತಿದಲರ್ಗಣ್ಗಳನೇನುಮನೆನ್ನದಂತುಪೇ|

ಕ್ಷಿಸಿ ಮನಮೆಲ್ಲಮಂ ಕವರ್ದಪಂ ತನುವಂ ಬಡಮಾಡಿ ಕಾಡಿ ದಂ

ಡಿಸಿದಪನಂಗಜನ್ಮನ ಕವರ್ತೆಯ ದಂಡದ ಪಾಂಗಿದೆಂತುಟೋ|| ೧೩||

(ಈ ಪದ್ಯದ ಮಾತುಗಳನ್ನು ಆಡುತ್ತಿರುವವನು ಅರ್ಜುನ) ʼಅಸಿಯಳನ್‌ ಒಲ್ಗುಂ, ಒಲ್ಲನ್‌ ಅಣಂʼ ಎನ್ನದೆ, ರೂಪನೆ ನೋಡಿ, ಕೂಡಲ್‌ ಆಟಿಸಿ, ಪರಿದು ಎಯ್ದಿ, ಪತ್ತಿದ ಅಲರ್ಗಣ್ಗಳನ್‌ ಏನುಮನ್‌ ಎನ್ನದೆ ಅಂತು ಉಪೇಕ್ಷಿಸಿ, ಮನಮೆಲ್ಲಮಂ ಕವರ್ದಪಂ, ತನುವಂ ಬಡಮಾಡಿ ಕಾಡಿ ದಂಡಿಸಿದಪನ್‌, ಅನಂಗಜನ್ಮನ ಕವರ್ತೆಯ ದಂಡದ ಪಾಂಗು ಇದು ಎಂತುಟೋ!

ʼನಾನು ಬಡಕಲಾಗಿದ್ದೇನೆ;‌ (ಆದ್ದರಿಂದ)ನನ್ನನ್ನು ಅವನು ಇಷ್ಟಪಡುತ್ತಾನೋ ಇಲ್ಲವೋʼ ಎಂದು ಹಿಂಜರಿಯದೆ, ನನ್ನ ರೂಪವನ್ನು ಕಂಡು, ಕೂಡಲು ಬಯಸಿ, ನನ್ನಡೆಗೆ ಬಂದು, ಮಾತನ್ನೇ ಆಡದೆ ಕಣ್ಣುಗಳನ್ನು ನನಗೆ ಅಂಟಿಸಿ, ತನ್ನನ್ನು ತಾನು ಕಡೆಗಣಿಸಿದಂತೆ ನಿಂತ ಅವಳ ಮನಸ್ಸನ್ನು ಮನ್ಮಥನು ಪೂರ್ಣವಾಗಿ ಸೂರೆ ಹೊಡೆದಿದ್ದಾನೆ; ಅವಳ ದೇಹವನ್ನು ಬಡಕಲಾಗಿಸಿ ಶಿಕ್ಷಿಸಿದ್ದಾನೆ! ಹೀಗೆ (ನಲ್ಲ-ನಲ್ಲೆಯರ) ಮನಸ್ಸು, ದೇಹಗಳನ್ನು ಸೂರೆಗೊಳ್ಳುವ, ಬಡವಾಗಿಸುವ ಅಂಗಜನ ಶಿಕ್ಷೆಯ ರೀತಿ ಅದು ಎಂತಹುದೋ?

ವ|| ಎಂದು ನಂದನವನೋಪಕಂಠಂಗಳೊಳನಂಗಶರವಶನಾಗಿ ತೊೞಲ್ದು ನೋಡುತ್ತುಂ ತನ್ನ ಮನದೊಳಿಂತೆಂದು ಬಗೆಗುಂ-

ಎಂದು ನಂದನವನ ಉಪಕಂಠಂಗಳೊಳ್‌ ಅನಂಗಶರವಶನಾಗಿ ತೊೞಲ್ದು ನೋಡುತ್ತುಂ, ತನ್ನ ಮನದೊಳ್‌ ಇಂತೆಂದು ಬಗೆಗುಂ

ಎಂದು ಕಾಮಬಾಣಕ್ಕೆ ವಶನಾಗಿ ಉದ್ಯಾನದ ಆಚೀಚೆಯಲ್ಲಿಯೇ ತಿರುಗಾಡುತ್ತ ತನ್ನ ಮನಸ್ಸಿನಲ್ಲಿಯೇ ಹೀಗೆಂದು ಆಲೋಚಿಸುತ್ತಾನೆ

ಚಂ|| ಉರಿವೆರ್ದೆಯಾರೆ ಚಿಂತಿಪ ಮನಂ ಗುಡಿಗಟ್ಟೆ ಮರಲ್ದು ನೋಡುವ

ಚ್ಚರಿಯೊಳೆ ಬೆಚ್ಚ ಕಣ್ಮಲರ್ಗೆ ಸಂತಸದಾಗರಮಾಗೆ ಬೇಟದೊಳ್|

ಬಿರಿವೊಡಲೊಯ್ಯನಂಕುರಿಸೆ ಸೈಪಿನೊಳಿಂತೆನಗೀಗಳೀ ವನಾಂ

ತರದೊಳೆ ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ|| ೧೪||

ಉರಿವ ಎರ್ದೆ ಆರೆ, ಚಿಂತಿಪ ಮನಂ ಗುಡಿಗಟ್ಟೆ, ಮರಲ್ದು ನೋಡುವ ಅಚ್ಚರಿಯೊಳೆ ಬೆಚ್ಚ ಕಣ್‌ ಮಲರ್ಗೆ ಸಂತಸದ ಆಗರಂ ಆಗೆ, ಬೇಟದೊಳ್ ಬಿರಿವ ಒಡಲ್‌ ಒಯ್ಯನೆ ಅಂಕುರಿಸೆ, ಸೈಪಿನೊಳ್‌ ಇಂತು ಎನಗೆ ಈಗಳೆ ಈ ವನಾಂತರದೊಳೆ ಕಾಣಲ್‌ ಅಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ?

ಉರಿಯುತ್ತಿರುವ (ನನ್ನ) ಎದೆ ತಂಪಾಗುವಂತೆ, ಚಿಂತಿಸುತ್ತಿರುವ ಮನಸ್ಸು ಖುಷಿಯಿಂದ ಜಿಗಿದಾಡುವಂತೆ, ಅಚ್ಚರಿಯಿಂದ ಕಣ್ಣುಬ್ಬಿಸಿ ನೋಡುತ್ತಿರುವಂತೆಯೇ ಬೆಸೆದ ಕಣ್ಣೋಟಗಳು ಸಂತಸದ ಚಿಲುಮೆಯಾಗುವಂತೆ,  ಪ್ರೇಮದ ಬಿಸಿಗೆ ಬಿರಿಯುತ್ತಿರುವ ಮೈ (ಮತ್ತೆ) ಮೆಲ್ಲನೆ

ರೋಮಾಂಚನಗೊಳ್ಳುವಂತೆ – ನನ್ನ ಬಯಕೆಗಳ ಮೂಲವೇ ಆದ ಅವಳನ್ನು- ನನ್ನ ಪುಣ್ಯದಿಂದ ನನಗೆ ಈಗಲೇ, ಈ ಕಾಡಿನೊಳಗೇ ಕಾಣಲು ಸಾಧ್ಯವಾದೀತೇ?

ವ|| ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಮೊಗಸಿ ಪಲರ ಪಲವುಂ ತೆಱದ ಬೇಟದ ಪಡೆಮಾತುಗಳಂ ಕೇಳ್ದಲ್ಲಿಯಾರಾನುಮೆಮ್ಮಂದಿಗರಿರ್ದರಕ್ಕುಮೆನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು-

ಎಂದು ಬಗೆಯುತ್ತುಂ ಆಕೆ ಇರ್ದ ಮಾಧವೀಮಂಟಪಕ್ಕೆ ಮೊಗಸಿ, ಪಲರ, ಪಲವುಂ ತೆಱದ, ಬೇಟದ ಪಡೆಮಾತುಗಳಂ ಕೇಳ್ದು, ʼಅಲ್ಲಿ ಆರಾನುಂ ಎಮ್ಮಂದಿಗರ್‌ ಇರ್ದರ್‌ ಅಕ್ಕುಂʼ ಎನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು,

ಎಂದು ಆಲೋಚಿಸುತ್ತಾ ಅವಳಿದ್ದ ಮಾಧವೀಮಂಟಪಕ್ಕೆ ಇಣುಕಿ (ಅಲ್ಲಿ) ಹಲವರ, ಹಲವು ಬಗೆಯ ಪ್ರೇಮದಾಟದ ಮಾತುಗಳು ಕಿವಿಗೆ ಬಿದ್ದಾಗ, ʼಓಹೋ! ಅಲ್ಲಿ ನಮ್ಮಂಥವರೇ ಯಾರೋ ಇದ್ದ ಹಾಗೆ ಕಾಣುತ್ತಿದೆ!ʼ ಎಂದುಕೊಳ್ಳುತ್ತಾ ಬಂದ ಅರ್ಜುನನನ್ನು ಸುಭದ್ರೆ ತಟ್ಟನೆ ನೋಡಿ(ದಾಗ)

ಚಂ|| ಪಡಿದೆರೆವಂದದಿಂದಮೆರ್ದೆಯುಂ ತೆರೆದತ್ತು ಪೊದಳ್ದ ಸಂಕೆಯಿಂ

ನಡುಕಮುಮಾಗಳುಬ್ಬದಿಗಮಾದುದು ಸಾಧ್ವಸದಿಂ ಬೆಮರ್ ಬೆಮ|

ರ್ವೆಡೆಗಳಿನುಣ್ಮಿ ಪೊಣ್ಮಿದುದು ಕಣ್ ನಡೆ ನೋಡದೆ ತಪ್ಪು ನೋಡಿ ನಾ

ಣೆಡೆಯೊಳಮಾದುದಾ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ|| ೧೫ ||

ಪಡಿದೆರೆವ ಅಂದದಿಂದಂ ಎರ್ದೆಯುಂ ತೆರೆದತ್ತು, ಪೊದಳ್ದ ಸಂಕೆಯಿಂ ನಡುಕಮುಂ ಆಗಳ್‌ ಉಬ್ಬದಿಗಂ ಆದುದು, ಸಾಧ್ವಸದಿಂ ಬೆಮರ್ ಬೆಮರ್ವ ಎಡೆಗಳಿನ್‌ ಉಣ್ಮಿ ಪೊಣ್ಮಿದುದು, ಕಣ್ ನಡೆ ನೋಡದೆ ತಪ್ಪು ನೋಡಿ ನಾಣ್‌ ಎಡೆಯೊಳಂ ಆದುದು ಆ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ

ಬಾಗಿಲು ತೆರೆದುಕೊಳ್ಳುವಂತೆ ಸುಭದ್ರೆಯ ಎದೆ ತೆರೆಯಿತು; ಆವರಿಸಿದ ಹೆದರಿಕೆಯಿಂದ ಮೈ ನಡುಗತೊಡಗಿತು; ಒಂದು ಕಡೆ ಭಯ, ಮತ್ತೊಂದು ಕಡೆ ಸಂಭ್ರಮಗಳುಂಟಾಗಿ ಮೈಯಿಂದ ಬೆವರು ಹರಿಯತೊಡಗಿತು;  ಕಣ್ಣುಗಳು ಅರ್ಜುನನನ್ನು ನೇರವಾಗಿ ಎದುರಿಸಿ ನೋಡಲಾರದೆ ಎಲ್ಲೆಲ್ಲೋ ನೋಡತೊಡಗಿದವು.

ವ|| ಆಗಳ್ ಸುರತಮಕರಧ್ವಜನುಮನಂಗಾಮೃತ ಪಯೋಧಿಯೊಳ್ ಮೂಡಿ ಮುೞುಗಾಡಿದರಂತೆ ಕಿಱಿದು ಬೇಗಮನಿರ್ದು ತನ್ನಿಂ ತಾನೆ ಚೇತರಿಸಿ ಸುಭದ್ರೆಯ ರೂಪನಾಪಾದಮಸ್ತಕಂಬರಮೆಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟುಮೇೞ್ಗೆವಾಡಿವದ ಸಸಿಯಂತೆ ಸೊಗಯಿಸುವಸಿಯಳಂ ಕಂಡು-

ಆಗಳ್ ಸುರತಮಕರಧ್ವಜನುಂ ಅನಂಗಾಮೃತ ಪಯೋಧಿಯೊಳ್ ಮೂಡಿ ಮುೞುಗಾಡಿದರಂತೆ ಕಿಱಿದು ಬೇಗಮನ್‌ ಇರ್ದು, ತನ್ನಿಂ ತಾನೆ ಚೇತರಿಸಿ, ಸುಭದ್ರೆಯ ರೂಪನ್‌ ಆಪಾದಮಸ್ತಕಂಬರಂ ಎಯ್ದೆ ನೋಡಿ ತನ್ನೊಳ್‌ ಆದ ಬೇಟದೊಳ್ ಬಡವಟ್ಟುಂ ಏೞ್ಗೆವಾಡಿವದ ಸಸಿಯಂತೆ ಸೊಗಯಿಸುವ ಅಸಿಯಳಂ ಕಂಡು-

ಆಗ ಅರ್ಜುನನು ಸ್ವಲ್ಪ ಹೊತ್ತು ಕಾಮಭಾವವೆಂಬ ಅಮೃತದ ಕಡಲಲ್ಲಿ ಮುಳುಗಿ ಎದ್ದವರಂತೆ ಇದ್ದು, ತನ್ನಷ್ಟಕ್ಕೆ ತಾನೆ ಚೇತರಿಸಿಕೊಂಡು, ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೂ ಚೆನ್ನಾಗಿ ನೋಡಿ, ತನ್ನ ಮೇಲಿನ ಮೋಹದಿಂದ ಶರೀರ ಬಡವಾಗಿದ್ದರೂ ಸಹ, ಶುಕ್ಲಪಕ್ಷ ಪಾಡ್ಯದ ಚಂದ್ರನಂತೆ ಶೋಭಿಸುವ ಸುಭದ್ರೆಯನ್ನು ಕಂಡು

[ಟಿಪ್ಪಣಿ: ಶುಕ್ಲ ಪಕ್ಷ ಪಾಡ್ಯ ಎಂದರೆ ಶುಕ್ಲಪಕ್ಷದ ಮೊದಲನೇ ದಿನ. ತಿಂಗಳಿಗೆ ಎರಡು ಪಕ್ಷಗಳು – ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ. (ಶುಕ್ಲ ಎಂದರೆ ಬಿಳಿ ಮತ್ತು ಕೃಷ್ಣ ಎಂದರೆ ಕಪ್ಪು) ಪ್ರತಿ ಪಕ್ಷದಲ್ಲೂ ಹದಿನೈದು ದಿನಗಳು. ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ ಮತ್ತು ಹುಣ್ಣಿಮೆ (ಶುಕ್ಲ ಪಕ್ಷವಾದರೆ) ಅಥವಾ ಅಮಾವಾಸ್ಯೆ (ಕೃಷ್ಣಪಕ್ಷವಾದರೆ). ಇಲ್ಲಿ ಕವಿ ಸುಭದ್ರೆ ಶುಕ್ಲ ಪಕ್ಷದ ಮೊದಲ ದಿನ ಚಂದ್ರ ಎಷ್ಟು ತೆಳ್ಳಗಿರುತ್ತಾನೋ ಅಷ್ಟೇ ತೆಳ್ಳಗಿದ್ದಳು ಎಂದು ವರ್ಣಿಸುತ್ತಿದ್ದಾನೆ!]

ಚಂ|| ಸರಸ ಮೃಣಾಳನಾಳವಳಯಂಗಳೊಳುಜ್ಜ್ವಳ ವೃತ್ತ ಮೌಕ್ತಿಕಾ

ಭರಣ ಗಣಂಗಳೊಳ್ ಶಶಿಕರಂಗಳೊಳಾಱದೆ ಬೇಟದೊಳ್ ಕನ|

ಲ್ದುರಿವೆರ್ದೆ ನೋಡ ನೋಡಲೊಡನಾಱಿದುದೇನಮರ್ದಿಂದೆ ತೊಯ್ದು ಕ

ಪ್ಪುರವಳುಕಿಂದಜಂ ಕಡೆದು ಕಂಡರಿಪಂ ವಲಮೆನ್ನ ನಲ್ಲಳಂ|| ೧೬||

ಸರಸ ಮೃಣಾಳನಾಳವಳಯಂಗಳೊಳ್‌, ಉಜ್ಜ್ವಳ ವೃತ್ತ ಮೌಕ್ತಿಕ ಆಭರಣ ಗಣಂಗಳೊಳ್, ಶಶಿಕರಂಗಳೊಳ್‌ ಆಱದೆ, ಬೇಟದೊಳ್ ಕನಲ್ದು ಉರಿವ ಎರ್ದೆ ನೋಡ! ನೋಡಲ್‌ ಒಡನೆ ಆಱಿದುದು! ಏನ್ ಅಮರ್ದಿಂದೆ ತೊಯ್ದು ಕಪ್ಪುರವಳುಕಿಂದೆ ಅಜಂ ಕಡೆದು ಕಂಡರಿಪಂ ವಲಂ ಎನ್ನ ನಲ್ಲಳಂ?

ರಸ ತುಂಬಿದ ಕಮಲದ ದೇಟಿನ ಬಳೆಗಳಿಂದಾಗಲಿ, ಹೊಳೆಯುವ ದುಂಡುಮುತ್ತುಗಳಿಂದಾದ ಆಭರಣಗಳ ರಾಶಿಯಿಂದಾಗಲಿ, ಚಂದ್ರನ ಕಿರಣಗಳಿಂದಾಗಲಿ ಆರದೆ, ಕಾಮದಿಂದ ಕೆರಳಿ ಉರಿಯುತ್ತಿದ್ದ ನನ್ನ ಎದೆ (ಸುಭದ್ರೆಯನ್ನು) ಕಂಡಕೂಡಲೇ ತಂಪಾಯಿತಲ್ಲ! ಬ್ರಹ್ಮನು ನನ್ನ ನಲ್ಲೆಯ ಈ ಮೂರ್ತಿಯನ್ನು ಅಮೃತದಲ್ಲಿ ತೋಯಿಸಿದ ಕರ್ಪೂರದ ಹರಳುಗಳಿಂದ ಕಡೆದು ರೂಪಿಸಿದನೋ ಹೇಗೆ?

ಉ|| ವೃತ್ತಕುಚಂಗಳಿಂದುದಿರ್ದ ಚಂದನದೊಳ್ ತಳಿರ್ವಾಸು ಬೆಳ್ಪನಾ

ಳ್ದತ್ತು ದುಕೂಲದೊಂದು ಮಡಿವಾಸಿದ ಮಾೞ್ಕೆವೊಲಾಯ್ತು ಮೆಯ್ಯನಿ|

ಕ್ಕುತ್ತಿರೆ ಪತ್ತಿ ಕೆಂದಳಿರ್ಗಳಚ್ಚುಗಳಚ್ಚಿಱಿದಂತೆ ಕಾಮನ

ಚ್ಚೊತ್ತಿದ ಬೇಟದಚ್ಚುಗಳ ಮಾೞ್ಕೆಯೊಳಿರ್ದುದು ಮೆಯ್ ಸುಭದ್ರೆಯಾ|| ೧೭||

ವೃತ್ತಕುಚಂಗಳಿಂದೆ ಉದಿರ್ದ ಚಂದನದೊಳ್ ತಳಿರ್‌ ಪಾಸು ಬೆಳ್ಪನ್‌ ಆಳ್ದತ್ತು, ದುಕೂಲದ ಒಂದು ಮಡಿ ಮಾಸಿದ ಮಾೞ್ಕೆವೊಲ್‌ ಆಯ್ತು, ಮೆಯ್ಯನ್‌ ಇಕ್ಕುತ್ತಿರೆ ಪತ್ತಿ ಕೆಂದಳಿರ್ಗಳ ಅಚ್ಚುಗಳ್‌ ಅಚ್ಚಿಱಿದಂತೆ ಕಾಮಂ ಅಚ್ಚೊತ್ತಿದ ಬೇಟದ ಅಚ್ಚುಗಳ ಮಾೞ್ಕೆಯೊಳ್‌ ಇರ್ದುದು ಮೆಯ್ ಸುಭದ್ರೆಯಾ

ದುಂಡುಮೊಲೆಗಳಿಂದ ಉದುರಿದ ಗಂಧದಿಂದ ಚಿಗುರಿನ ಮೇಲುಹಾಸು ಬಿಳಿಯ ಬಣ್ಣಕ್ಕೆ ತಿರುಗಿದೆ! ತೊಳೆದ ರೇಷ್ಮೆಯ ಬಟ್ಟೆ ಮಾಸಿದಂತೆ ಕಾಣಿಸುತ್ತಿದೆ! ಮಲಗಿದಾಗ (ಈ ಸುಭದ್ರೆಯ) ಮೈಯನ್ನು ಒತ್ತಿದ ಕೆಂಪು ಚಿಗುರುಗಳ ಅಚ್ಚು ಮೈಮೇಲೆ ಕಾಮನೇ ಪ್ರೇಮದ ಅಚ್ಚುಗಳನ್ನು ಒತ್ತಿದ್ದಾನೋ ಎಂಬಂತೆ ಕಾಣುತ್ತಿದೆ!

ವ|| ಅದಱಿನೀಕೆಯುಮೆನಗೆರಡಱಿಯದ ನಲ್ಲ ಮನಂದೋಱುವುದುಂ ಸಲ್ಗೆದೋಱುವುದುಮಾವುದು ದೋಸಮೆಂದಾಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ ನಾಣ್ಚಿ ಪೋಗಲೆಂದೆೞ್ದ ಕನ್ನೆಯಂ ಚೂತಲತಿಕೆಯೆಂಬ ಕೆಳದಿ ಜಡಿದು ಕುಳ್ಳಿರಿಸಿ ಗಂಧೇಭ ವಿದ್ಯಾಧರನನಿಂತೆಂದಳ್-

ಅದಱಿನ್‌ ಈಕೆಯುಂ ಎನಗೆ ಎರಡಱಿಯದ ನಲ್ಲ ಮನಂ ತೋಱುವುದುಂ, ಸಲ್ಗೆ ತೋಱುವುದುಂ ಆವುದು ದೋಸಂ ಎಂದು, ಆಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ, ನಾಣ್ಚಿ ಪೋಗಲೆಂದು ಎೞ್ದ ಕನ್ನೆಯಂ ಚೂತಲತಿಕೆಯೆಂಬ ಕೆಳದಿ ಜಡಿದು ಕುಳ್ಳಿರಿಸಿ, ಗಂಧೇಭ ವಿದ್ಯಾಧರನನ್‌ ಇಂತೆಂದಳ್

ʼಆದ್ದರಿಂದ (ವಿರಹ ತಪ್ತೆಯಾದ) ಈಕೆಯು ನನ್ನ ವಿಷಯದಲ್ಲಿ ಕಪಟವಿಲ್ಲದ ಒಳ್ಳೆಯ ಮನಸ್ಸನ್ನು ತೋರುವುದರಲ್ಲೂ, ಸಲಿಗೆ ತೋರುವುದರಲ್ಲೂ ದೋಷವೇನಿದೆ?ʼ ಎಂದು ಆಲೋಚಿಸಿ, ಅವಳು ಕುಳಿತಿದ್ದ ಚಿಗುರಿನ ಹಾಸಿಗೆಯ ಮೇಲೆಯೇ ತಾನೂ ಕುಳಿತನು! ಆಗ ಸುಭದ್ರೆಯು ನಾಚಿಕೊಂಡು ಅಲ್ಲಿಂದ ಎದ್ದು ಹೊರಡಲು ತಯಾರಾದಳು! ಆದರೆ ಅವಳ ಗೆಳತಿ ಚೂತಲತಿಕೆಯು ಅವಳನ್ನು ಗದರಿಸಿ ಅಲ್ಲಿಯೇ ಕೂರಿಸಿ ಅರ್ಜುನನಿಗೆ ಹೀಗೆಂದಳು:

ಚಂ|| ಮದನನ ಕಾಯ್ಪು ಮಾಣ್ಗೆ ಸರಸೀರುಹಜನ್ಮನ ಮೆಚ್ಚು ತೀರ್ಗೆ ಕೊ

ಳ್ಗುದಿ ಮನದಿಂದಮಿಂದು ಪೊಱಮಾಱುಗೆ ಚಂದ್ರಕರಂಗಳಿಂದುತ|

ಣ್ಣಿದುವೆರ್ದೆಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂ

ಟದೊಳಿನಿದಕ್ಕೆ ಮತ್ಸಖಿಗೆ ಬೇರೆ ಪಳಾಳದೊಳೇಂ ಗುಣಾರ್ಣವಾ|| ೧೮ ||

ಮದನನ ಕಾಯ್ಪು ಮಾಣ್ಗೆ, ಸರಸೀರುಹಜನ್ಮನ ಮೆಚ್ಚು ತೀರ್ಗೆ, ಕೊಳ್ಗುದಿ ಮನದಿಂದಂ ಇಂದು ಪೊಱಮಾಱುಗೆ, ಚಂದ್ರಕರಂಗಳ್‌ ಇಂದು ತಣ್ಣಿದುವು ಎರ್ದೆಗೆ ಅಕ್ಕೆ, ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ, ನಿನ್ನ ಕೂಟದೊಳ್‌ ಇನಿದಕ್ಕೆ ಮತ್ಸಖಿಗೆ, ಬೇರೆ ಪಳಾಳದೊಳ್‌ ಏಂ ಗುಣಾರ್ಣವಾ?

(ಈ ನನ್ನ ಗೆಳತಿಯ) ಕಾಮನ ಕಾವು ಇಳಿಯಲಿ; ಬ್ರಹ್ಮನ ಇಚ್ಛೆ ಈಡೇರಲಿ; ಪ್ರೇಮಾಕ್ರಮಣದ ನೋವು  ಮನದಿಂದ ಹೊರಟುಹೋಗಲಿ; ಚಂದ್ರಕಿರಣಗಳು ಇಂದು ಎದೆಗೆ ತಂಪು ನೀಡಲಿ; ಕೆಂಪು ಚಿಗುರುಗಳಿಂದ ಉಂಟಾಗುವ ತಾಪ ಕಡಿಮೆಯಾಗಲಿ; ನಿನ್ನನ್ನು  ಕೂಡಿದ್ದರಿಂದ ನನ್ನ ಗೆಳತಿಗೆ ಸುಖದ ಸವಿ ಸಿಗಲಿ; ಅರ್ಜುನಾ! ಬೇರೆ ಪೊಳ್ಳುಮಾತುಗಳಿಂದ ಏನುತಾನೆ ಪ್ರಯೋಜನ?

ಚಂ||ಬೆಳಗುವ ಸಾಂದ್ರಚಂದ್ರಕಿರಣಾಳಿಗಳೋಳಿಗಳಿಂದಮೆತ್ತಮು

ಜ್ಜ್ವಳಿಸುವಿರುಳ್ಗಳಂ ಕಳೆದುಮೆಯ್ದೆ ತಳಿರ್ತೆಳಮಾವುಮಂ ಮನಂ|

ಗೊಳೆ ನಡೆ ನೋಡಿಯುಂ ಕಿವಿಯನಿಂದೊಳದಿಂಚರಕಾಂತುಮಿಂತು ಕೋ

ಮಳೆಯಸು ಮತ್ತಮೀಯೊಡಲೊಳಿರ್ದುದಿದೆಮ್ಮಯ ಸೈಪು ಭೂಪತೀ|| ೧೯ ||

ಬೆಳಗುವ ಸಾಂದ್ರಚಂದ್ರಕಿರಣಾಳಿಗಳ ಓಳಿಗಳಿಂದಂ ಎತ್ತಂ ಉಜ್ಜ್ವಳಿಸುವ ಇರುಳ್ಗಳಂ ಕಳೆದುಂ, ಎಯ್ದೆ ತಳಿರ್ತ ಎಳಮಾವುಮಂ ಮನಂಗೊಳೆ ನಡೆ ನೋಡಿಯುಂ, ಕಿವಿಯನ್‌ ಇಂದೊಳದ ಇಂಚರಕೆ ಆಂತುಂ, ಇಂತು ಕೋಮಳೆಯ ಅಸು ಮತ್ತಂ ಈ ಒಡಲೊಳ್‌ ಇರ್ದುದು ಇದು ಎಮ್ಮಯ ಸೈಪು ಭೂಪತೀ!

ʼಎಲೈ ರಾಜನೇ, ಬೆಳಗುವ ತುಂಬು ಬೆಳ್ದಿಂಗಳ ಬೆಳಕಿನ ರಾಶಿಯಿಂದ ಪ್ರಕಾಶಿಸುವ ರಾತ್ರಿಗಳನ್ನು ಕಳೆದೂ, ಸೊಂಪಾಗಿ ಚಿಗುರಿದ ಎಳೆಯ ಮಾವಿನ ಮರಗಳನ್ನು ಮನವಿಟ್ಟು ಕಂಡೂ, ಕಿವಿಗಳಲ್ಲಿ ಹಿಂದೋಳ ರಾಗದ ಇಂಚರವನ್ನು ಕೇಳಿಯೂ ಈ ಕೋಮಲೆಯ ಜೀವ ಇನ್ನೂ ಶರೀರದಲ್ಲಿ ಉಳಿದುಕೊಂಡಿದೆಯಲ್ಲ, ಅದು ನಮ್ಮ ಪುಣ್ಯʼ

(ಇಂದೊಳ: ಹಿಂದೋಳ ರಾಗ; ಮಾಲ್ ಕಂಸ್; ಯುಟ್ಯೂಬಿನಲ್ಲಿ ಬೇಕಾದಷ್ಟು ವೀಡಿಯೋಗಳಿವೆ. https://youtu.be/ukoxmbNe4Ec)

ವ|| ಅಂತಾಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟೆಳವಾೞೆಯಂತೆ ಸುರತ ಮಕರಧ್ವಜನೊಳಾದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳತ್ತ ಮನುಜ ಮನೋಜನುಂ ಮದನಪರಿತಾಪಕ್ಕಾಱದುಮ್ಮಳಿಸಿ ಮಧುಮಥನನ ಕಣ್ಣಂ ಬಂಚಿಸಿ ವಿಜೃಂಭಮಾಣ ನವ ನಳಿನ ಪರಿಕರಾಕೃಷ್ಟ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ ವಿರಹಿ ಜನನಿಚಯ ನಿಚಿತ ಮಾನಸೋನ್ಮತ್ತ ಕಾಮಿನೀ ಗಂಡೂಷ ಸಿಂಧು ಸೇಕ ಪುಳಕಿತ ವಕುಳ ಮುಕುಳ ವಿದಳಿತ ಮನೋಹರಾಶೋಕಲತಾ ರಮಣೀ ರಮಣೀಯ ನೂಪುರರವ ರಮ್ಯಮನವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನುತ್ಫುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲೋಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನೆಯ್ದೆವಂದು-

ಅಂತು ಆ ಬಾಲೆ ಕಾಯ್ದ ಪುಡಿಯೊಳಗೆ ಬಿಸುಟ್ಟ ಎಳವಾೞೆಯಂತೆ ಸುರತ ಮಕರಧ್ವಜನೊಳ್‌ ಆದ ಬೇಟದೊಳ್ ಮಮ್ಮಲ ಮಱುಗುತ್ತಿರ್ದಳ್‌; ಅತ್ತ ಮನುಜ ಮನೋಜನುಂ ಮದನಪರಿತಾಪಕ್ಕೆ ಆಱದೆ ಉಮ್ಮಳಿಸಿ, ಮಧುಮಥನನ ಕಣ್ಣಂ ಬಂಚಿಸಿ, ವಿಜೃಂಭಮಾಣ ನವ ನಳಿನ ಪರಿಕರ ಆಕೃಷ್ಟ ಮಧುಕರ ರಮಣೀಯಪುಳಿನ ಪರಿಸರ ಪ್ರದೇಶ ನಿವೇಶಿತ (ಇರಿಸಲಾದ) ವಿರಹಿ ಜನನಿಚಯ(ಗುಂಪು) ನಿಚಿತ (ವ್ಯಾಪ್ತವಾದ), ಮಾನಸ ಉನ್ಮತ್ತ ಕಾಮಿನೀ ಗಂಡೂಷ ಸಿಂಧು ಸೇಕ ಪುಳಕಿತ ವಕುಳ ಮುಕುಳ, ವಿದಳಿತ ಮನೋಹರ ಅಶೋಕ ಲತಾ ರಮಣೀ ರಮಣೀಯ ನೂಪುರರವ ರಮ್ಯಮನ್‌, ಅವಿರಳ ಕುಸುಮಧೂಳೀ ಧೂಸರ ಪುಳಿನ ಧವಳಿತ ಧರಾತಳಮನ್‌, ಉತ್ಫುಲ್ಲ ಪಲ್ಲವ ಲೀಲಾಯಮಾನ ಮತ್ತಕೋಕಿಲ ಉಲ್ಲಾಸಿತ ಶೀಕರೋದ್ದಾಮ ದುರ್ದಿನ ವನಮನ್‌ ಎಯ್ದೆವಂದು

ಹಾಗೆ ಆ ಬಾಲೆಯು ಅರ್ಜುನನಲ್ಲಿ ತನಗುಂಟಾದ ಉತ್ಕಟಮೋಹದಿಂದ,  ಸುಡುಬಿಸಿ ಹುಡಿಮಣ್ಣಿನಲ್ಲಿ ಎಸೆದ ಬಾಳೆ ಮೀನಿನಂತೆ ಒದ್ದಾಡುತ್ತಿದ್ದಳು. ಅತ್ತ ಮನುಜಮನೋಜನೂ (ಅರ್ಜುನ) ಕಾಮನ ಕಾಟವನ್ನು ತಡೆದುಕೊಳ್ಳಲಾಗದೆ ಸಂಕಟಪಡುತ್ತಾ, ಶ್ರೀಕೃಷ್ಣನ ಕಣ್ಣು ತಪ್ಪಿಸಿ (ಉದ್ಯಾನವನದತ್ತ) ಹೊರಟನು; (ಅಲ್ಲಿ) ಜೇನು ಹುಳಗಳು ಹೊಸತಾಗಿ ಅರಳಿದ್ದ ತಾವರೆಗಳ ಗುಂಪನ್ನು ಮುತ್ತಿಕೊಂಡಿದ್ದವು;  ಮರಳು ಹರಡಿಕೊಂಡಿದ್ದ ಆ ಪರಿಸರದಲ್ಲಿ ವಿರಹಿ ಜನರು (ಅಲೆದಾಡುತ್ತಿದ್ದರು); ಅಲ್ಲಿ, ಮದವೇರಿದ ಹೆಣ್ಣುಗಳು ಮುಕ್ಕುಳಿಸಿ ಉಗಿದ ಮದಿರೆಯ ತುಂತುರುಗಳಿಂದ ರೋಮಾಂಚನಗೊಂಡ ಬಕುಳದ ಮೊಗ್ಗುಗಳಿದ್ದವು; ಅಶೋಕ ಲತೆ ಎಂಬ ರಮಣಿಯ ನೂಪುರಗಳ ಮಧುರವಾದ ನಾದವಿತ್ತು; ದಟ್ಟವಾಗಿ ಹರಡಿ ಬಿದ್ದಿದ್ದ ಹೂಗಳ ಪರಾಗದಿಂದಾಗಿ ಅಲ್ಲಿನ ನೆಲವು ಮರಳಿನ ಬಣ್ಣವನ್ನು ತಳೆದಿತ್ತು, ಅರಳಿ ನಿಂತ ಚಿಗುರುಗಳ ಲೀಲೆ ಇತ್ತು; (ಹೀಗೆ) ಮದಿಸಿದ ಕೋಗಿಲೆಗಳ ಕೂಗಿನಿಂದ, ಮೋಡ ಕವಿದ ವಾತಾವರಣದಿಂದ  ಉಲ್ಲಾಸಗೊಂಡ ಉದ್ದವಾದ ಆ ದಿನದಂದು (ಅರ್ಜುನನು)  ವನವನ್ನು ಸಮೀಪಿಸಿ

(ಟಿಪ್ಪಣಿ: ಇಲ್ಲಿ ʼಅಶೋಕ ಲತಾ ರಮಣೀ ರಮಣೀಯ ನೂಪುರರವ ರಮ್ಯಮನ್‌ʼ ಎಂಬ ಮಾತಿನ ಅರ್ಥವೇನು? ಶಬ್ದಗಳನ್ನೇ ಆಧರಿಸಿ ಹೇಳುವುದಾದರೆ ʼ ಅಶೋಕ ಲತೆ ಎಂಬ ರಮಣಿಯ ನೂಪುರಗಳ ಮಧುರವಾದ ನಾದವಿತ್ತುʼ ಎನ್ನಬೇಕು. ಕವಿಯ ಪ್ರಕಾರ ಅಶೋಕ ಎಂಬುದು ಒಂದು ಬಳ್ಳಿ. ಕವಿ ಆ ಬಳ್ಳಿಯನ್ನು ಹೆಣ್ಣಿಗೆ ಹೋಲಿಸಿದ್ದಾನೆ. ಆದರೆ ಆ ಬಳ್ಳಿಗೆ ʼಕಾಲ್ಕಡಗʼ ಎಲ್ಲಿಂದ ಬಂತು? ಅದರ ʼಮಧುರವಾದ ನಾದʼ  ಎಂದರೆ ಏನು? ಇಲ್ಲಿ ಕೆಲವು ಸೂಚಿತ ಪಾಠಗಳಿವೆ. ಈ ಪಾಠಗಳಿಂದಾಗಿ ಶಬ್ದಗಳು ಅರ್ಥವಾಗುತ್ತವೆಯಾದರೂ, ಸುಸಂಬದ್ಧವಾದ ಒಂದು ಒಟ್ಟಂದದ ಕಲ್ಪನೆ ಮೂಡಿ ಬರುವುದಿಲ್ಲ.)

ಚಂ|| ಬಿರಿದಲರೊಳ್ ತೆಱಂಬೊಳೆವ ತುಂಬಿ ತಳಿರ್ತೆಳಮಾವು ಮಾವಿನಂ

ಕುರಮನೆ ಕರ್ಚಿ ಬಿಚ್ಚೞಿಪ ಕೋಗಿಲೆ ಕಂಪನವುಂಕಿ ಪೊತ್ತು ನಿ|

ತ್ತರಿಪೆಲರೆಂಬಿವೇವುವೊ ಮದೀಯ ಮನೋಗತ ಕಾಮ ರಾಗ ಸಾ

ಗರದೊದವಿಂಗೆ ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ|| ೧೧||

ಬಿರಿದ ಅಲರೊಳ್ ತೆಱಂಬೊಳೆವ ತುಂಬಿ, ತಳಿರ್ತ ಎಳಮಾವು, ಮಾವಿನ ಅಂಕುರಮನೆ ಕರ್ಚಿ ಬಿಚ್ಚೞಿಪ ಕೋಗಿಲೆ, ಕಂಪನ್‌ ಅವುಂಕಿ ಪೊತ್ತು ನಿತ್ತರಿಪ ಎರಲ್ ಎಂಬಿವು ಏವುವೊ? ಮದೀಯ ಮನೋಗತ ಕಾಮ ರಾಗ ಸಾಗರದ ಒದವಿಂಗೆ ನಲ್ಲಳ ವಿಲೋಕನಚಂದ್ರಿಕೆಯೊಂದೆ ಸಾಲದೇ?

ಅರಳಿದ ಹೂಗಳಲ್ಲಿ ತೆರತೆರನಾಗಿ ಹೊಳೆಯುವ ದುಂಬಿಗಳು, ಚಿಗುರಿ ನಿಂತ ಎಳೆಯ ಮಾವಿನಮರ, ಮಾವಿನ ಚಿಗುರನ್ನು ಕಚ್ಚಿ (ನೆಲದ ಮೇಲೆಲ್ಲ) ಹರಡುವ ಕೋಗಿಲೆ,  ಪರಿಮಳವನ್ನು ಅವುಚಿ ಹಿಡಿದು, ಹೊತ್ತು ದಾಟಿಸುವ ಗಾಳಿ – ಇವುಗಳೆಲ್ಲ ಏನು ತಾನೇ ಮಾಡಿಯಾವು? ನನ್ನ ಮನಸ್ಸಿನಲ್ಲಿರುವ ಕಾಮಪ್ರೇಮಗಳ ಕಡಲು ಉಕ್ಕಬೇಕೆಂದರೆ ಆ ನಲ್ಲೆಯ ನೋಟವೆಂಬ ಬೆಳದಿಂಗಳೊಂದೇ ಸಾಕಲ್ಲವೇ?

ವ|| ಎನುತ್ತುಂ ಬಂದು ಬಿರಿದ ಬಿರಿಮುಗುಳ್ಗಳೊಳೆಱಗಿ ತುಱುಗಿದಶೋಕಲತೆಯನೞ್ಕರ್ತು ನೋಡಿ-

ಎನುತ್ತುಂ ಬಂದು, ಬಿರಿದ ಬಿರಿಮುಗುಳ್ಗಳೊಳ್‌ ಎಱಗಿ ತುಱುಗಿದ ಅಶೋಕಲತೆಯನ್‌ ಅೞ್ಕರ್ತು ನೋಡಿ,

ಎನ್ನುತ್ತಾ ಬಂದು, ಬಿರಿದ ಮೊಗ್ಗುಗಳು ತುಂಬಿಕೊಂಡ ಅಶೋಕಲತೆಯನ್ನು ಪ್ರೀತಿಯಿಂದ ನೋಡಿ,

ಚಂ|| ಅಲರಲರ್ಗಣ್ ಮುಗುಳ್‌ನಗೆ ಮಡಲ್ ತೊಡೆ ತುಂಬಿ ಕುರುಳ್ ತಳಿರ್ ತಳಂ

ಗೊಲೆ ಮೊಲೆ ಕೆಂಪು ಕೆಂಪು ಕೊನೆ ಸೆಳ್ಳುಗುರ್ಗಳ್ ಕುಡಿ ತೋಳ್ ನಯಂ ನಯಂ|

ನೆಲೆ ನೆಲೆ ಭಂಗಿ ಭಂಗಿ ಪದವಣ್ ಬೆಳರ್ವಾಯ್ ಪೆಱತಲ್ಲಿದೆಂತೊ ಕೋ

ಮಲಲತೆ ಪೇೞಿಮೆನ್ನಿನಿಯಳಂ ಮರೆಗೊಂಡುದೊ ಸೂರೆಗೊಂಡುದೋ|| ೧೨||

ಅಲರ್‌-ಅಲರ್ಗಣ್; ಮುಗುಳ್‌-ನಗೆ; ಮಡಲ್-ತೊಡೆ; ತುಂಬಿ-ಕುರುಳ್; ತಳಿರ್-ತಳಂ; ಗೊಲೆ-ಮೊಲೆ; ಕೆಂಪು-ಕೆಂಪು; ಕೊನೆ-ಸೆಳ್ಳುಗುರ್ಗಳ್; ಕುಡಿ-ತೋಳ್; ನಯಂ-ನಯಂ; ನೆಲೆ-ನೆಲೆ; ಭಂಗಿ-ಭಂಗಿ; ಪದವಣ್- ಬೆಳರ್ವಾಯ್ ಪೆಱತಲ್ಲ ಇದೆಂತೊ ಕೋಮಲಲತೆ ಪೇೞಿಂ ಎನ್ನ ಇನಿಯಳಂ ಮರೆಗೊಂಡುದೊ ಸೂರೆಗೊಂಡುದೋ?

(ಇಲ್ಲಿ ಅರ್ಜುನ ತನ್ನೆದುರಿನ ಬಳುಕುವ ಬಳ್ಳಿಗೂ ತನ್ನ ನಲ್ಲೆಗೂ ಇರುವ ಹೋಲಿಕೆಗಳನ್ನು ಎತ್ತಿ ಹೇಳುತ್ತಿದ್ದಾನೆ).

(ಬಳ್ಳಿಯ)ಹೂವು – (ನಲ್ಲೆಯ) ಹೂವಿನಂಥ ಕಣ್ಣು; ಮೊಗ್ಗು – ನಗು; ರೆಂಬೆ – ತೊಡೆ; ತುಂಬಿ – ಗುಂಗುರು ಕೂದಲು; ಚಿಗುರು – ಅಂಗೈ; (ಮೊಗ್ಗಿನ) ಗೊಂಚಲು – ಮೊಲೆ; ಕೆಂಪು – ಕೆಂಪು; ಎಳೆಯ ಕವಲುಗಳು – ಮೆದುವಾದ ಉಗುರುಗಳು;  ಕುಡಿ – ತೋಳುಗಳು; ನಯ – ನಯ; ನೆಲೆ – ನೆಲೆ; ಭಂಗಿ – ಭಂಗಿ; ಹದವಾದ ಹಣ್ಣುಗಳು – ಹೊಳೆಯುವ ತುಟಿಗಳು; (ಇವೆಲ್ಲವನ್ನೂ ಕಂಡಾಗ) ಈ ಕೋಮಲವಾದ ಬಳ್ಳಿಯು ತನ್ನೊಳಗೆ ನನ್ನ ನಲ್ಲೆಯನ್ನು ಮರೆಮಾಡಿ ಇಟ್ಟುಕೊಂಡಿದೆಯೋ ಅಥವಾ ಅವಳನ್ನೇ ಸೂರೆ ಹೊಡೆದು ತಾನು ರೂಪುಗೊಂಡಿದೆಯೋ ಹೇಳಿರಿ!

ವ|| ಎಂದು ಕಿಱಿದಾನುಂ ಬೇಗಮಱೆಮರುಳಾದಂತಾ ಲತೆಯೊಳ್ ಪೞಿಗಾಳೆಗಂಗಾದಿ ಬರೆವರೆ ಕಾಮದೇವನಿಮ್ಮಾವಿನ ನನೆಯನಂಬುಗಳುಮನವಱ ಬಲ್ಮಿಡಿಯನೆ ಮಿಟ್ಟೆಯುಮಂ ಮಾಡಿ ತನ್ನನೇಸಾಡಿ ಕಾಡೆ-

ಎಂದು ಕಿಱಿದಾನುಂ ಬೇಗಂ ಅಱೆಮರುಳಾದಂತೆ ಆ ಲತೆಯೊಳ್ ಪೞಿಗಾಳೆಗಂ ಕಾದಿ ಬರೆವರೆ, ಕಾಮದೇವನ್‌ ಇಮ್ಮಾವಿನ ನನೆಯನ್‌ ಅಂಬುಗಳುಮನ್‌, ಅವಱ ಬಲ್ಮಿಡಿಯನೆ ಮಿಟ್ಟೆಯುಮಂ ಮಾಡಿ, ತನ್ನನ್‌ ಏಸಾಡಿ ಕಾಡೆ-

ಎಂದು ಸ್ವಲ್ಪ ಹೊತ್ತು ಅರೆಹುಚ್ಚನಂತೆ ಆ ಬಳ್ಳಿಯೊಂದಿಗೆ ಬೈಗುಳದ ಯುದ್ಧಕ್ಕಿಳಿದನು! (ನಂತರ) ಮುಂದುವರಿದು ಬರುತ್ತಿರಲು, ಕಾಮದೇವನು ಸಿಹಿಮಾವಿನ ಮೊಗ್ಗನ್ನು ಬಾಣವಾಗಿಸಿ, ಅದರ ದೊಡ್ಡ ಮಿಡಿಯನ್ನು ಮಣ್ಣಿನ ಗೋಲಿಯಾಗಿಸಿ ತನ್ನ ಮೇಲೆ ಪ್ರಯೋಗ ಮಾಡಿ ಹಿಂಸಿಸಲು

ಚಂ|| ಅಸಿಯಳನೊಲ್ಗುಮೊಲ್ಲನಣಮೆನ್ನದೆ ರೂಪನೆ ನೋಡಿ ಕೂಡಲಾ

ಟಿಸಿ ಪರಿದೆಯ್ದಿ ಪತ್ತಿದಲರ್ಗಣ್ಗಳನೇನುಮನೆನ್ನದಂತುಪೇ|

ಕ್ಷಿಸಿ ಮನಮೆಲ್ಲಮಂ ಕವರ್ದಪಂ ತನುವಂ ಬಡಮಾಡಿ ಕಾಡಿ ದಂ

ಡಿಸಿದಪನಂಗಜನ್ಮನ ಕವರ್ತೆಯ ದಂಡದ ಪಾಂಗಿದೆಂತುಟೋ|| ೧೩||

(ಈ ಪದ್ಯದ ಮಾತುಗಳನ್ನು ಆಡುತ್ತಿರುವವನು ಅರ್ಜುನ) ʼಅಸಿಯಳನ್‌ ಒಲ್ಗುಂ, ಒಲ್ಲನ್‌ ಅಣಂʼ ಎನ್ನದೆ, ರೂಪನೆ ನೋಡಿ, ಕೂಡಲ್‌ ಆಟಿಸಿ, ಪರಿದು ಎಯ್ದಿ, ಪತ್ತಿದ ಅಲರ್ಗಣ್ಗಳನ್‌ ಏನುಮನ್‌ ಎನ್ನದೆ ಅಂತು ಉಪೇಕ್ಷಿಸಿ, ಮನಮೆಲ್ಲಮಂ ಕವರ್ದಪಂ, ತನುವಂ ಬಡಮಾಡಿ ಕಾಡಿ ದಂಡಿಸಿದಪನ್‌, ಅನಂಗಜನ್ಮನ ಕವರ್ತೆಯ ದಂಡದ ಪಾಂಗು ಇದು ಎಂತುಟೋ!

ʼನಾನು ಬಡಕಲಾಗಿದ್ದೇನೆ;‌ (ಆದ್ದರಿಂದ)ನನ್ನನ್ನು ಅವನು ಇಷ್ಟಪಡುತ್ತಾನೋ ಇಲ್ಲವೋʼ ಎಂದು ಹಿಂಜರಿಯದೆ, ನನ್ನ ರೂಪವನ್ನು ಕಂಡು, ಕೂಡಲು ಬಯಸಿ, ನನ್ನಡೆಗೆ ಬಂದು, ಮಾತನ್ನೇ ಆಡದೆ ಕಣ್ಣುಗಳನ್ನು ನನಗೆ ಅಂಟಿಸಿ, ತನ್ನನ್ನು ತಾನು ಕಡೆಗಣಿಸಿದಂತೆ ನಿಂತ ಅವಳ ಮನಸ್ಸನ್ನು ಮನ್ಮಥನು ಪೂರ್ಣವಾಗಿ ಸೂರೆ ಹೊಡೆದಿದ್ದಾನೆ; ಅವಳ ದೇಹವನ್ನು ಬಡಕಲಾಗಿಸಿ ಶಿಕ್ಷಿಸಿದ್ದಾನೆ! ಹೀಗೆ (ನಲ್ಲ-ನಲ್ಲೆಯರ) ಮನಸ್ಸು, ದೇಹಗಳನ್ನು ಸೂರೆಗೊಳ್ಳುವ, ಬಡವಾಗಿಸುವ ಅಂಗಜನ ಶಿಕ್ಷೆಯ ರೀತಿ ಅದು ಎಂತಹುದೋ?

ವ|| ಎಂದು ನಂದನವನೋಪಕಂಠಂಗಳೊಳನಂಗಶರವಶನಾಗಿ ತೊೞಲ್ದು ನೋಡುತ್ತುಂ ತನ್ನ ಮನದೊಳಿಂತೆಂದು ಬಗೆಗುಂ-

ಎಂದು ನಂದನವನ ಉಪಕಂಠಂಗಳೊಳ್‌ ಅನಂಗಶರವಶನಾಗಿ ತೊೞಲ್ದು ನೋಡುತ್ತುಂ, ತನ್ನ ಮನದೊಳ್‌ ಇಂತೆಂದು ಬಗೆಗುಂ

ಎಂದು ಕಾಮಬಾಣಕ್ಕೆ ವಶನಾಗಿ ಉದ್ಯಾನದ ಆಚೀಚೆಯಲ್ಲಿಯೇ ತಿರುಗಾಡುತ್ತ ತನ್ನ ಮನಸ್ಸಿನಲ್ಲಿಯೇ ಹೀಗೆಂದು ಆಲೋಚಿಸುತ್ತಾನೆ

ಚಂ|| ಉರಿವೆರ್ದೆಯಾರೆ ಚಿಂತಿಪ ಮನಂ ಗುಡಿಗಟ್ಟೆ ಮರಲ್ದು ನೋಡುವ

ಚ್ಚರಿಯೊಳೆ ಬೆಚ್ಚ ಕಣ್ಮಲರ್ಗೆ ಸಂತಸದಾಗರಮಾಗೆ ಬೇಟದೊಳ್|

ಬಿರಿವೊಡಲೊಯ್ಯನಂಕುರಿಸೆ ಸೈಪಿನೊಳಿಂತೆನಗೀಗಳೀ ವನಾಂ

ತರದೊಳೆ ಕಾಣಲಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ|| ೧೪||

ಉರಿವ ಎರ್ದೆ ಆರೆ, ಚಿಂತಿಪ ಮನಂ ಗುಡಿಗಟ್ಟೆ, ಮರಲ್ದು ನೋಡುವ ಅಚ್ಚರಿಯೊಳೆ ಬೆಚ್ಚ ಕಣ್‌ ಮಲರ್ಗೆ ಸಂತಸದ ಆಗರಂ ಆಗೆ, ಬೇಟದೊಳ್ ಬಿರಿವ ಒಡಲ್‌ ಒಯ್ಯನೆ ಅಂಕುರಿಸೆ, ಸೈಪಿನೊಳ್‌ ಇಂತು ಎನಗೆ ಈಗಳೆ ಈ ವನಾಂತರದೊಳೆ ಕಾಣಲ್‌ ಅಕ್ಕುಮೊ ಮದೀಯ ಮನೋರಥ ಜನ್ಮಭೂಮಿಯಂ?

ಉರಿಯುತ್ತಿರುವ (ನನ್ನ) ಎದೆ ತಂಪಾಗುವಂತೆ, ಚಿಂತಿಸುತ್ತಿರುವ ಮನಸ್ಸು ಖುಷಿಯಿಂದ ಜಿಗಿದಾಡುವಂತೆ, ಅಚ್ಚರಿಯಿಂದ ಕಣ್ಣುಬ್ಬಿಸಿ ನೋಡುತ್ತಿರುವಂತೆಯೇ ಬೆಸೆದ ಕಣ್ಣೋಟಗಳು ಸಂತಸದ ಚಿಲುಮೆಯಾಗುವಂತೆ,  ಪ್ರೇಮದ ಬಿಸಿಗೆ ಬಿರಿಯುತ್ತಿರುವ ಮೈ (ಮತ್ತೆ) ಮೆಲ್ಲನೆ

ರೋಮಾಂಚನಗೊಳ್ಳುವಂತೆ – ನನ್ನ ಬಯಕೆಗಳ ಮೂಲವೇ ಆದ ಅವಳನ್ನು- ನನ್ನ ಪುಣ್ಯದಿಂದ ನನಗೆ ಈಗಲೇ, ಈ ಕಾಡಿನೊಳಗೇ ಕಾಣಲು ಸಾಧ್ಯವಾದೀತೇ?

ವ|| ಎಂದು ಬಗೆಯುತ್ತುಮಾಕೆಯಿರ್ದ ಮಾಧವೀಮಂಟಪಕ್ಕೆ ಮೊಗಸಿ ಪಲರ ಪಲವುಂ ತೆಱದ ಬೇಟದ ಪಡೆಮಾತುಗಳಂ ಕೇಳ್ದಲ್ಲಿಯಾರಾನುಮೆಮ್ಮಂದಿಗರಿರ್ದರಕ್ಕುಮೆನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು-

ಎಂದು ಬಗೆಯುತ್ತುಂ ಆಕೆ ಇರ್ದ ಮಾಧವೀಮಂಟಪಕ್ಕೆ ಮೊಗಸಿ, ಪಲರ, ಪಲವುಂ ತೆಱದ, ಬೇಟದ ಪಡೆಮಾತುಗಳಂ ಕೇಳ್ದು, ʼಅಲ್ಲಿ ಆರಾನುಂ ಎಮ್ಮಂದಿಗರ್‌ ಇರ್ದರ್‌ ಅಕ್ಕುಂʼ ಎನುತ್ತುಂ ಬರ್ಪ ಗಂಧೇಭ ವಿದ್ಯಾಧರನಂ ಸುಭದ್ರೆ ಭೋಂಕನೆ ಕಂಡು,

ಎಂದು ಆಲೋಚಿಸುತ್ತಾ ಅವಳಿದ್ದ ಮಾಧವೀಮಂಟಪಕ್ಕೆ ಇಣುಕಿ (ಅಲ್ಲಿ) ಹಲವರ, ಹಲವು ಬಗೆಯ ಪ್ರೇಮದಾಟದ ಮಾತುಗಳು ಕಿವಿಗೆ ಬಿದ್ದಾಗ, ʼಓಹೋ! ಅಲ್ಲಿ ನಮ್ಮಂಥವರೇ ಯಾರೋ ಇದ್ದ ಹಾಗೆ ಕಾಣುತ್ತಿದೆ!ʼ ಎಂದುಕೊಳ್ಳುತ್ತಾ ಬಂದ ಅರ್ಜುನನನ್ನು ಸುಭದ್ರೆ ತಟ್ಟನೆ ನೋಡಿ(ದಾಗ)

ಚಂ|| ಪಡಿದೆರೆವಂದದಿಂದಮೆರ್ದೆಯುಂ ತೆರೆದತ್ತು ಪೊದಳ್ದ ಸಂಕೆಯಿಂ

ನಡುಕಮುಮಾಗಳುಬ್ಬದಿಗಮಾದುದು ಸಾಧ್ವಸದಿಂ ಬೆಮರ್ ಬೆಮ|

ರ್ವೆಡೆಗಳಿನುಣ್ಮಿ ಪೊಣ್ಮಿದುದು ಕಣ್ ನಡೆ ನೋಡದೆ ತಪ್ಪು ನೋಡಿ ನಾ

ಣೆಡೆಯೊಳಮಾದುದಾ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ|| ೧೫ ||

ಪಡಿದೆರೆವ ಅಂದದಿಂದಂ ಎರ್ದೆಯುಂ ತೆರೆದತ್ತು, ಪೊದಳ್ದ ಸಂಕೆಯಿಂ ನಡುಕಮುಂ ಆಗಳ್‌ ಉಬ್ಬದಿಗಂ ಆದುದು, ಸಾಧ್ವಸದಿಂ ಬೆಮರ್ ಬೆಮರ್ವ ಎಡೆಗಳಿನ್‌ ಉಣ್ಮಿ ಪೊಣ್ಮಿದುದು, ಕಣ್ ನಡೆ ನೋಡದೆ ತಪ್ಪು ನೋಡಿ ನಾಣ್‌ ಎಡೆಯೊಳಂ ಆದುದು ಆ ಸತಿಗೆ ನೋಡಲೊಡಂ ಪಡೆಮೆಚ್ಚೆಗಂಡನಂ

ಬಾಗಿಲು ತೆರೆದುಕೊಳ್ಳುವಂತೆ ಸುಭದ್ರೆಯ ಎದೆ ತೆರೆಯಿತು; ಆವರಿಸಿದ ಹೆದರಿಕೆಯಿಂದ ಮೈ ನಡುಗತೊಡಗಿತು; ಒಂದು ಕಡೆ ಭಯ, ಮತ್ತೊಂದು ಕಡೆ ಸಂಭ್ರಮಗಳುಂಟಾಗಿ ಮೈಯಿಂದ ಬೆವರು ಹರಿಯತೊಡಗಿತು;  ಕಣ್ಣುಗಳು ಅರ್ಜುನನನ್ನು ನೇರವಾಗಿ ಎದುರಿಸಿ ನೋಡಲಾರದೆ ಎಲ್ಲೆಲ್ಲೋ ನೋಡತೊಡಗಿದವು.

ವ|| ಆಗಳ್ ಸುರತಮಕರಧ್ವಜನುಮನಂಗಾಮೃತ ಪಯೋಧಿಯೊಳ್ ಮೂಡಿ ಮುೞುಗಾಡಿದರಂತೆ ಕಿಱಿದು ಬೇಗಮನಿರ್ದು ತನ್ನಿಂ ತಾನೆ ಚೇತರಿಸಿ ಸುಭದ್ರೆಯ ರೂಪನಾಪಾದಮಸ್ತಕಂಬರಮೆಯ್ದೆ ನೋಡಿ ತನ್ನೊಳಾದ ಬೇಟದೊಳ್ ಬಡವಟ್ಟುಮೇೞ್ಗೆವಾಡಿವದ ಸಸಿಯಂತೆ ಸೊಗಯಿಸುವಸಿಯಳಂ ಕಂಡು-

ಆಗಳ್ ಸುರತಮಕರಧ್ವಜನುಂ ಅನಂಗಾಮೃತ ಪಯೋಧಿಯೊಳ್ ಮೂಡಿ ಮುೞುಗಾಡಿದರಂತೆ ಕಿಱಿದು ಬೇಗಮನ್‌ ಇರ್ದು, ತನ್ನಿಂ ತಾನೆ ಚೇತರಿಸಿ, ಸುಭದ್ರೆಯ ರೂಪನ್‌ ಆಪಾದಮಸ್ತಕಂಬರಂ ಎಯ್ದೆ ನೋಡಿ ತನ್ನೊಳ್‌ ಆದ ಬೇಟದೊಳ್ ಬಡವಟ್ಟುಂ ಏೞ್ಗೆವಾಡಿವದ ಸಸಿಯಂತೆ ಸೊಗಯಿಸುವ ಅಸಿಯಳಂ ಕಂಡು-

ಆಗ ಅರ್ಜುನನು ಸ್ವಲ್ಪ ಹೊತ್ತು ಕಾಮಭಾವವೆಂಬ ಅಮೃತದ ಕಡಲಲ್ಲಿ ಮುಳುಗಿ ಎದ್ದವರಂತೆ ಇದ್ದು, ತನ್ನಷ್ಟಕ್ಕೆ ತಾನೆ ಚೇತರಿಸಿಕೊಂಡು, ಸುಭದ್ರೆಯ ರೂಪವನ್ನು ಕಾಲಿನಿಂದ ತಲೆಯವರೆಗೂ ಚೆನ್ನಾಗಿ ನೋಡಿ, ತನ್ನ ಮೇಲಿನ ಮೋಹದಿಂದ ಶರೀರ ಬಡವಾಗಿದ್ದರೂ ಸಹ, ಶುಕ್ಲಪಕ್ಷ ಪಾಡ್ಯದ ಚಂದ್ರನಂತೆ ಶೋಭಿಸುವ ಸುಭದ್ರೆಯನ್ನು ಕಂಡು

[ಟಿಪ್ಪಣಿ: ಶುಕ್ಲ ಪಕ್ಷ ಪಾಡ್ಯ ಎಂದರೆ ಶುಕ್ಲಪಕ್ಷದ ಮೊದಲನೇ ದಿನ. ತಿಂಗಳಿಗೆ ಎರಡು ಪಕ್ಷಗಳು – ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ. (ಶುಕ್ಲ ಎಂದರೆ ಬಿಳಿ ಮತ್ತು ಕೃಷ್ಣ ಎಂದರೆ ಕಪ್ಪು) ಪ್ರತಿ ಪಕ್ಷದಲ್ಲೂ ಹದಿನೈದು ದಿನಗಳು. ಪಾಡ್ಯ, ಬಿದಿಗೆ, ತದಿಗೆ, ಚೌತಿ, ಪಂಚಮಿ, ಷಷ್ಠಿ, ಸಪ್ತಮಿ, ಅಷ್ಟಮಿ, ನವಮಿ, ದಶಮಿ, ಏಕಾದಶಿ, ದ್ವಾದಶಿ, ತ್ರಯೋದಶಿ, ಚತುರ್ದಶಿ ಮತ್ತು ಹುಣ್ಣಿಮೆ (ಶುಕ್ಲ ಪಕ್ಷವಾದರೆ) ಅಥವಾ ಅಮಾವಾಸ್ಯೆ (ಕೃಷ್ಣಪಕ್ಷವಾದರೆ). ಇಲ್ಲಿ ಕವಿ ಸುಭದ್ರೆ ಶುಕ್ಲ ಪಕ್ಷದ ಮೊದಲ ದಿನ ಚಂದ್ರ ಎಷ್ಟು ತೆಳ್ಳಗಿರುತ್ತಾನೋ ಅಷ್ಟೇ ತೆಳ್ಳಗಿದ್ದಳು ಎಂದು ವರ್ಣಿಸುತ್ತಿದ್ದಾನೆ!]

ಚಂ|| ಸರಸ ಮೃಣಾಳನಾಳವಳಯಂಗಳೊಳುಜ್ಜ್ವಳ ವೃತ್ತ ಮೌಕ್ತಿಕಾ

ಭರಣ ಗಣಂಗಳೊಳ್ ಶಶಿಕರಂಗಳೊಳಾಱದೆ ಬೇಟದೊಳ್ ಕನ|

ಲ್ದುರಿವೆರ್ದೆ ನೋಡ ನೋಡಲೊಡನಾಱಿದುದೇನಮರ್ದಿಂದೆ ತೊಯ್ದು ಕ

ಪ್ಪುರವಳುಕಿಂದಜಂ ಕಡೆದು ಕಂಡರಿಪಂ ವಲಮೆನ್ನ ನಲ್ಲಳಂ|| ೧೬||

ಸರಸ ಮೃಣಾಳನಾಳವಳಯಂಗಳೊಳ್‌, ಉಜ್ಜ್ವಳ ವೃತ್ತ ಮೌಕ್ತಿಕ ಆಭರಣ ಗಣಂಗಳೊಳ್, ಶಶಿಕರಂಗಳೊಳ್‌ ಆಱದೆ, ಬೇಟದೊಳ್ ಕನಲ್ದು ಉರಿವ ಎರ್ದೆ ನೋಡ! ನೋಡಲ್‌ ಒಡನೆ ಆಱಿದುದು! ಏನ್ ಅಮರ್ದಿಂದೆ ತೊಯ್ದು ಕಪ್ಪುರವಳುಕಿಂದೆ ಅಜಂ ಕಡೆದು ಕಂಡರಿಪಂ ವಲಂ ಎನ್ನ ನಲ್ಲಳಂ?

ರಸ ತುಂಬಿದ ಕಮಲದ ದೇಟಿನ ಬಳೆಗಳಿಂದಾಗಲಿ, ಹೊಳೆಯುವ ದುಂಡುಮುತ್ತುಗಳಿಂದಾದ ಆಭರಣಗಳ ರಾಶಿಯಿಂದಾಗಲಿ, ಚಂದ್ರನ ಕಿರಣಗಳಿಂದಾಗಲಿ ಆರದೆ, ಕಾಮದಿಂದ ಕೆರಳಿ ಉರಿಯುತ್ತಿದ್ದ ನನ್ನ ಎದೆ (ಸುಭದ್ರೆಯನ್ನು) ಕಂಡಕೂಡಲೇ ತಂಪಾಯಿತಲ್ಲ! ಬ್ರಹ್ಮನು ನನ್ನ ನಲ್ಲೆಯ ಈ ಮೂರ್ತಿಯನ್ನು ಅಮೃತದಲ್ಲಿ ತೋಯಿಸಿದ ಕರ್ಪೂರದ ಹರಳುಗಳಿಂದ ಕಡೆದು ರೂಪಿಸಿದನೋ ಹೇಗೆ?

ಉ|| ವೃತ್ತಕುಚಂಗಳಿಂದುದಿರ್ದ ಚಂದನದೊಳ್ ತಳಿರ್ವಾಸು ಬೆಳ್ಪನಾ

ಳ್ದತ್ತು ದುಕೂಲದೊಂದು ಮಡಿವಾಸಿದ ಮಾೞ್ಕೆವೊಲಾಯ್ತು ಮೆಯ್ಯನಿ|

ಕ್ಕುತ್ತಿರೆ ಪತ್ತಿ ಕೆಂದಳಿರ್ಗಳಚ್ಚುಗಳಚ್ಚಿಱಿದಂತೆ ಕಾಮನ

ಚ್ಚೊತ್ತಿದ ಬೇಟದಚ್ಚುಗಳ ಮಾೞ್ಕೆಯೊಳಿರ್ದುದು ಮೆಯ್ ಸುಭದ್ರೆಯಾ|| ೧೭||

ವೃತ್ತಕುಚಂಗಳಿಂದೆ ಉದಿರ್ದ ಚಂದನದೊಳ್ ತಳಿರ್‌ ಪಾಸು ಬೆಳ್ಪನ್‌ ಆಳ್ದತ್ತು, ದುಕೂಲದ ಒಂದು ಮಡಿ ಮಾಸಿದ ಮಾೞ್ಕೆವೊಲ್‌ ಆಯ್ತು, ಮೆಯ್ಯನ್‌ ಇಕ್ಕುತ್ತಿರೆ ಪತ್ತಿ ಕೆಂದಳಿರ್ಗಳ ಅಚ್ಚುಗಳ್‌ ಅಚ್ಚಿಱಿದಂತೆ ಕಾಮಂ ಅಚ್ಚೊತ್ತಿದ ಬೇಟದ ಅಚ್ಚುಗಳ ಮಾೞ್ಕೆಯೊಳ್‌ ಇರ್ದುದು ಮೆಯ್ ಸುಭದ್ರೆಯಾ

ದುಂಡುಮೊಲೆಗಳಿಂದ ಉದುರಿದ ಗಂಧದಿಂದ ಚಿಗುರಿನ ಮೇಲುಹಾಸು ಬಿಳಿಯ ಬಣ್ಣಕ್ಕೆ ತಿರುಗಿದೆ! ತೊಳೆದ ರೇಷ್ಮೆಯ ಬಟ್ಟೆ ಮಾಸಿದಂತೆ ಕಾಣಿಸುತ್ತಿದೆ! ಮಲಗಿದಾಗ (ಈ ಸುಭದ್ರೆಯ) ಮೈಯನ್ನು ಒತ್ತಿದ ಕೆಂಪು ಚಿಗುರುಗಳ ಅಚ್ಚು ಮೈಮೇಲೆ ಕಾಮನೇ ಪ್ರೇಮದ ಅಚ್ಚುಗಳನ್ನು ಒತ್ತಿದ್ದಾನೋ ಎಂಬಂತೆ ಕಾಣುತ್ತಿದೆ!

ವ|| ಅದಱಿನೀಕೆಯುಮೆನಗೆರಡಱಿಯದ ನಲ್ಲ ಮನಂದೋಱುವುದುಂ ಸಲ್ಗೆದೋಱುವುದುಮಾವುದು ದೋಸಮೆಂದಾಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ ನಾಣ್ಚಿ ಪೋಗಲೆಂದೆೞ್ದ ಕನ್ನೆಯಂ ಚೂತಲತಿಕೆಯೆಂಬ ಕೆಳದಿ ಜಡಿದು ಕುಳ್ಳಿರಿಸಿ ಗಂಧೇಭ ವಿದ್ಯಾಧರನನಿಂತೆಂದಳ್-

ಅದಱಿನ್‌ ಈಕೆಯುಂ ಎನಗೆ ಎರಡಱಿಯದ ನಲ್ಲ ಮನಂ ತೋಱುವುದುಂ, ಸಲ್ಗೆ ತೋಱುವುದುಂ ಆವುದು ದೋಸಂ ಎಂದು, ಆಕೆ ಕುಳ್ಳಿರ್ದ ತಳಿರ ಸಜ್ಜೆಯೊಡನೆ ಕುಳ್ಳಿರ್ಪುದುಂ, ನಾಣ್ಚಿ ಪೋಗಲೆಂದು ಎೞ್ದ ಕನ್ನೆಯಂ ಚೂತಲತಿಕೆಯೆಂಬ ಕೆಳದಿ ಜಡಿದು ಕುಳ್ಳಿರಿಸಿ, ಗಂಧೇಭ ವಿದ್ಯಾಧರನನ್‌ ಇಂತೆಂದಳ್

ʼಆದ್ದರಿಂದ (ವಿರಹ ತಪ್ತೆಯಾದ) ಈಕೆಯು ನನ್ನ ವಿಷಯದಲ್ಲಿ ಕಪಟವಿಲ್ಲದ ಒಳ್ಳೆಯ ಮನಸ್ಸನ್ನು ತೋರುವುದರಲ್ಲೂ, ಸಲಿಗೆ ತೋರುವುದರಲ್ಲೂ ದೋಷವೇನಿದೆ?ʼ ಎಂದು ಆಲೋಚಿಸಿ, ಅವಳು ಕುಳಿತಿದ್ದ ಚಿಗುರಿನ ಹಾಸಿಗೆಯ ಮೇಲೆಯೇ ತಾನೂ ಕುಳಿತನು! ಆಗ ಸುಭದ್ರೆಯು ನಾಚಿಕೊಂಡು ಅಲ್ಲಿಂದ ಎದ್ದು ಹೊರಡಲು ತಯಾರಾದಳು! ಆದರೆ ಅವಳ ಗೆಳತಿ ಚೂತಲತಿಕೆಯು ಅವಳನ್ನು ಗದರಿಸಿ ಅಲ್ಲಿಯೇ ಕೂರಿಸಿ ಅರ್ಜುನನಿಗೆ ಹೀಗೆಂದಳು:

ಚಂ|| ಮದನನ ಕಾಯ್ಪು ಮಾಣ್ಗೆ ಸರಸೀರುಹಜನ್ಮನ ಮೆಚ್ಚು ತೀರ್ಗೆ ಕೊ

ಳ್ಗುದಿ ಮನದಿಂದಮಿಂದು ಪೊಱಮಾಱುಗೆ ಚಂದ್ರಕರಂಗಳಿಂದುತ|

ಣ್ಣಿದುವೆರ್ದೆಗಕ್ಕೆ ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ ನಿನ್ನ ಕೂ

ಟದೊಳಿನಿದಕ್ಕೆ ಮತ್ಸಖಿಗೆ ಬೇರೆ ಪಳಾಳದೊಳೇಂ ಗುಣಾರ್ಣವಾ|| ೧೮ ||

ಮದನನ ಕಾಯ್ಪು ಮಾಣ್ಗೆ, ಸರಸೀರುಹಜನ್ಮನ ಮೆಚ್ಚು ತೀರ್ಗೆ, ಕೊಳ್ಗುದಿ ಮನದಿಂದಂ ಇಂದು ಪೊಱಮಾಱುಗೆ, ಚಂದ್ರಕರಂಗಳ್‌ ಇಂದು ತಣ್ಣಿದುವು ಎರ್ದೆಗೆ ಅಕ್ಕೆ, ಕೆಂದಳಿರ ಸೆಜ್ಜೆಯ ಜಿಂಜಿಣಿ ಪೋಕೆ, ನಿನ್ನ ಕೂಟದೊಳ್‌ ಇನಿದಕ್ಕೆ ಮತ್ಸಖಿಗೆ, ಬೇರೆ ಪಳಾಳದೊಳ್‌ ಏಂ ಗುಣಾರ್ಣವಾ?

(ಈ ನನ್ನ ಗೆಳತಿಯ) ಕಾಮನ ಕಾವು ಇಳಿಯಲಿ; ಬ್ರಹ್ಮನ ಇಚ್ಛೆ ಈಡೇರಲಿ; ಪ್ರೇಮಾಕ್ರಮಣದ ನೋವು  ಮನದಿಂದ ಹೊರಟುಹೋಗಲಿ; ಚಂದ್ರಕಿರಣಗಳು ಇಂದು ಎದೆಗೆ ತಂಪು ನೀಡಲಿ; ಕೆಂಪು ಚಿಗುರುಗಳಿಂದ ಉಂಟಾಗುವ ತಾಪ ಕಡಿಮೆಯಾಗಲಿ; ನಿನ್ನನ್ನು  ಕೂಡಿದ್ದರಿಂದ ನನ್ನ ಗೆಳತಿಗೆ ಸುಖದ ಸವಿ ಸಿಗಲಿ; ಅರ್ಜುನಾ! ಬೇರೆ ಪೊಳ್ಳುಮಾತುಗಳಿಂದ ಏನುತಾನೆ ಪ್ರಯೋಜನ?

ಚಂ||ಬೆಳಗುವ ಸಾಂದ್ರಚಂದ್ರಕಿರಣಾಳಿಗಳೋಳಿಗಳಿಂದಮೆತ್ತಮು

ಜ್ಜ್ವಳಿಸುವಿರುಳ್ಗಳಂ ಕಳೆದುಮೆಯ್ದೆ ತಳಿರ್ತೆಳಮಾವುಮಂ ಮನಂ|

ಗೊಳೆ ನಡೆ ನೋಡಿಯುಂ ಕಿವಿಯನಿಂದೊಳದಿಂಚರಕಾಂತುಮಿಂತು ಕೋ

ಮಳೆಯಸು ಮತ್ತಮೀಯೊಡಲೊಳಿರ್ದುದಿದೆಮ್ಮಯ ಸೈಪು ಭೂಪತೀ|| ೧೯ ||

ಬೆಳಗುವ ಸಾಂದ್ರಚಂದ್ರಕಿರಣಾಳಿಗಳ ಓಳಿಗಳಿಂದಂ ಎತ್ತಂ ಉಜ್ಜ್ವಳಿಸುವ ಇರುಳ್ಗಳಂ ಕಳೆದುಂ, ಎಯ್ದೆ ತಳಿರ್ತ ಎಳಮಾವುಮಂ ಮನಂಗೊಳೆ ನಡೆ ನೋಡಿಯುಂ, ಕಿವಿಯನ್‌ ಇಂದೊಳದ ಇಂಚರಕೆ ಆಂತುಂ, ಇಂತು ಕೋಮಳೆಯ ಅಸು ಮತ್ತಂ ಈ ಒಡಲೊಳ್‌ ಇರ್ದುದು ಇದು ಎಮ್ಮಯ ಸೈಪು ಭೂಪತೀ!

ʼಎಲೈ ರಾಜನೇ, ಬೆಳಗುವ ತುಂಬು ಬೆಳ್ದಿಂಗಳ ಬೆಳಕಿನ ರಾಶಿಯಿಂದ ಪ್ರಕಾಶಿಸುವ ರಾತ್ರಿಗಳನ್ನು ಕಳೆದೂ, ಸೊಂಪಾಗಿ ಚಿಗುರಿದ ಎಳೆಯ ಮಾವಿನ ಮರಗಳನ್ನು ಮನವಿಟ್ಟು ಕಂಡೂ, ಕಿವಿಗಳಲ್ಲಿ ಹಿಂದೋಳ ರಾಗದ ಇಂಚರವನ್ನು ಕೇಳಿಯೂ ಈ ಕೋಮಲೆಯ ಜೀವ ಇನ್ನೂ ಶರೀರದಲ್ಲಿ ಉಳಿದುಕೊಂಡಿದೆಯಲ್ಲ, ಅದು ನಮ್ಮ ಪುಣ್ಯʼ

(ಇಂದೊಳ: ಹಿಂದೋಳ ರಾಗ;

ಮಾಲ್ ಕಂಸ್; ಯುಟ್ಯೂಬಿನಲ್ಲಿ ಬೇಕಾದಷ್ಟು ವೀಡಿಯೋಗಳಿವೆ. https://youtu.be/ukoxmbNe4Ec)