ಪಂಪಭಾರತ ಆಶ್ವಾಸ ೨ ಪದ್ಯಗಳು: ೧೮ರಿಂದ ೨೯

ಚಂ|| ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್ ತಡಮಾಡೆ ಗಾಡಿ ದಿ|
     ಟ್ಟಿಗಳೊಳನಂಗರಾಗರಸಮುಣ್ಮುವಿನಂ ನಡೆ ನೋಡಿ ನೋಡಿ ತೊ||
     ಟ್ಟಗೆ ಕೊಳೆ ಮೇಲೆ ಪಾಯ್ದವಳನಪ್ಪಿದನಾ ವಿಭು ತನ್ನ ಶಾಪಮಂ|
     ಬಗೆಯದೆ ಮಿೞ್ತುದೇವತೆಯನೞ್ಕಱಳುರ್ಕೆಯಿನಪ್ಪುವಂತೆವೋಲ್||೧೮|| 
(ಸೊಗಯಿಸೆ ತೊಟ್ಟ ಪೂದುಡುಗೆ ಮೆಲ್ಲೆರ್ದೆಯೊಳ್, ತಡಂ ಆಡೆ ಗಾಡಿ, ದಿಟ್ಟಿಗಳೊಳ್ ಅನಂಗರಾಗರಸಂ ಉಣ್ಮುವಿನಂ ನಡೆ ನೋಡಿ ನೋಡಿ, ತೊಟ್ಟಗೆ ಕೊಳೆ ಮೇಲೆ ಪಾಯ್ದು ಅವಳನ್ ಅಪ್ಪಿದನ್ ಆ ವಿಭು ತನ್ನ ಶಾಪಮಂ ಬಗೆಯದೆ, ಮಿೞ್ತುದೇವತೆಯನ್  ಅೞ್ಕಱ್  ಅಳುರ್ಕೆಯಿನ್ ಅಪ್ಪುವಂತೆವೋಲ್)

ಮಾದ್ರಿಯು ತೊಟ್ಟ ಹೂವಿನ ಹಾರ ಅವಳ ಮೆದುಮೊಲೆಗಳನ್ನು ಅಲಂಕರಿಸಿತ್ತು. ಅವಳ ಆ ಚೆಲುವು ಪಾಂಡುರಾಜನಲ್ಲಿ ಹೊಸ  ಹುರುಪು ಹೊಮ್ಮಿಸಿತ್ತು. ಕಣ್ಣುಗಳಿಂದ ಕಾಮರಸ ಚಿಮ್ಮುವ ಹಾಗೆ ಪಾಂಡುರಾಜ ಅವಳನ್ನೇ ದಿಟ್ಟಿಸಿ ನೋಡಿದ. ಹಾಗೆ  ನೋಡುತ್ತ ನೋಡುತ್ತಲೇ, ಇದ್ದಕ್ಕಿದ್ದಂತೆ, ತನ್ನ ಮೇಲಿದ್ದ ಮುನಿಯ ಶಾಪವನ್ನೂ ಮರೆತು, ಅವಳ ಮೇಲೆ ಹಾಯ್ದು, ಮೃತ್ಯುದೇವತೆಯನ್ನು ಬಹಳ ಪ್ರೀತಿಯಿಂದ ಅಪ್ಪಿಕೊಳ್ಳುವಂತೆ, ಅವಳನ್ನು ಅಪ್ಪಿಕೊಂಡ.

ವ|| ಅಂತಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ-
( ಅಂತು ಅಪ್ಪುವುದುಂ, ವಿಷಮ ವಿಷವಲ್ಲಿಯನ್ ಅಪ್ಪಿದಂತೆ, ತಳ್ತ ನಲ್ಲಳ ಮೃದು ಮೃಣಾಳ ಕೋಮಳ ಬಾಹುಪಾಶಂಗಳೆ ಯಮಪಾಶಂಗಳಾಗೆ)
ಹಾಗೆ ಅಪ್ಪಿಕೊಂಡದ್ದೇ ತಡ, ಕೇಡುಗೈಯುವ ವಿಷದ ಬಳ್ಳಿಯನ್ನು ಅಪ್ಪಿದಂತಾಗಿ, ಅವನನ್ನು ಹಿಡಿದಿದ್ದ ತಾವರೆಮೆದುವಾದ ಅವಳ ಕೈಗಳೇ ಅವನ ಪಾಲಿನ ಯಮಪಾಶವಾಗಲು,

ಚಂ|| ಬಿಗಿದಮರ್ದಿರ್ದ ತೋಳ್ ಸಡಿಲೆ ಜೋಲೆ ಮೊಗಂ ಮೊಗದಿಂದಮೊಯ್ಯಗೊ|
     ಯ್ಯಗೆ ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ ಸುಯ್ಯಡಂಗೆ ಮೆ||
     ಲ್ಲಗೆ ಮಱಸೊಂದಿದಂದದೊಳೆ ಜೋಲ್ದ ನಿಜೇಶನನಾ ಲತಾಂಗಿ ತೊ|
     ಟ್ಟಗೆ ಕೊಳೆ ನೋಡಿ ಕೆಟ್ಟೆನಿನಿಯಂ ಮಱಸೊಂದಿದನೋ ಬೞಲ್ದನೋ||೧೯|| 
(ಬಿಗಿದು ಅಮರ್ದಿರ್ದ ತೋಳ್ ಸಡಿಲೆ, ಜೋಲೆ ಮೊಗಂ ಮೊಗದಿಂದಂ, ಒಯ್ಯಗೊಯ್ಯಗೆ ನಗೆಗಣ್ಗಳ್ ಆಲಿ ಮಗುೞ್ದಂತಿರೆ ಮುಚ್ಚಿರೆ, ಸುಯ್ ಅಡಂಗೆ, ಮೆಲ್ಲಗೆ ಮಱಸೊಂದಿದ ಅಂದದೊಳೆ ಜೋಲ್ದ ನಿಜೇಶನನ್ ಆ ಲತಾಂಗಿ ತೊಟ್ಟಗೆ ಕೊಳೆ ನೋಡಿ, ‘ಕೆಟ್ಟೆನ್ ಇನಿಯಂ ಮಱಸೊಂದಿದನೋ ಬೞಲ್ದನೋ’)
ಅವಳನ್ನು ಬಿಗಿಯಾಗಿ ಅಪ್ಪಿ ಹಿಡಿದಿದ್ದ ಅವನ ತೋಳುಗಳು  ಸಡಿಲಾದವು. ಅವಳ ಮುಖಕ್ಕೆ ತಾಗಿದಂತಿದ್ದ ಅವನ ಮುಖ ಜೋತು ಮೆಲ್ಲನೆ ಕೆಳಜಾರಿತು. ಮೆಲ್ಲಮೆಲ್ಲನೆ ಕಣ್ಣ ಪಾಪೆಗಳು ಒಳಸರಿದಂತಾಗಿ ಕಣ್ಣುಗಳು ಮುಚ್ಚಿಕೊಂಡವು. ಉಸಿರು ಅಡಗಿತು. ಮೆಲ್ಲನೆ ನಿದ್ರೆಗೆ ಜಾರಿದವನಂತೆ ಜೋತುಬಿದ್ದ ಪತಿಯನ್ನು ನೋಡಿ ಮಾದ್ರಿಯು ‘ನಾನು ಕೆಟ್ಟೆ! ನಲ್ಲನು ನಿದ್ರೆ ಹೋದನೋ? ಆಯಾಸಗೊಂಡನೋ?’

ವ|| ಎಂದು ಪಱಿಪಟ್ಟ ಸುಯ್ಯುಮಂ ಕೋಡುವ ಮೆಯ್ಯುಮಂ ಕಂಡು ಪರಲೋಕ ಪ್ರಾಪ್ತನಾದುದನಱಿತು- 
(ಎಂದು ಪಱಿಪಟ್ಟ ಸುಯ್ಯುಮಂ ಕೋಡುವ ಮೆಯ್ಯುಮಂ ಕಂಡು,  ಪರಲೋಕ ಪ್ರಾಪ್ತನ್ ಆದುದನ್ ಅಱಿತು-)
ಎಂದು ತುಂಡಾದ ಉಸಿರನ್ನೂ, ತಣ್ಣಗಾದ ಮೈಯನ್ನೂ ಕಂಡು, ಪತಿಯು ತೀರಿಕೊಂಡಿರುವುದನ್ನು ತಿಳಿದು 

ಕಂ|| ತಾಪಸನ ಶಾಪಮೆಂಬುದು|
     ಪಾಪದ ರೂಪಱಿತುಮಱಿಯದಂತೇಕೆ ಮನಂ||
     ಗಾಪೞಿದು ಬಂದು ಮುಟ್ಟಿದೆ|
     ಯೋಪನೆ ನೀನೆನ್ನ ಪಾಪಕರ್ಮಿಯ ಮೆಯ್ಯಂ||೨೦|| 
(ತಾಪಸನ ಶಾಪ ಎಂಬುದು ಪಾಪದ ರೂಪು, ಅಱಿತುಂ ಅಱಿಯದಂತೆ ಏಕೆ ಮನಂಗಾಪು ಅೞಿದು ಬಂದು ಮುಟ್ಟಿದೆ   ಓಪನೆ ನೀನ್ ಎನ್ನ, ಪಾಪಕರ್ಮಿಯ, ಮೆಯ್ಯಂ)
ತಾಪಸನ ಶಾಪ ಎನ್ನುವುದು (ನೀನು ಮಾಡಿದ) ಪಾಪದ ಮೂರ್ತರೂಪ. ಇದು ಗೊತ್ತಿದ್ದೂ ಇಲ್ಲದವನಂತೆ, ಮನಸಿನ ಎಚ್ಚರವನ್ನು ಕಳೆದುಕೊಂಡು, ನಲ್ಲನೆ, ನೀನು ಏಕೆ ಬಂದು ನನ್ನ, ಪಾಪಕರ್ಮಿಯ, ಮೈಮುಟ್ಟಿದೆ?
    
ಕಂ| ನೀನ್ನಿನ್ನ ಸಾವನದನೆನ|
     ಸುನ್ನೆನೆಯದೆ ನೆರೆವೆನೆಂಬ ಬಗೆಯೊಳ್ ಬಂದೈ||
     ನಿನ್ನೊಡನೆ ವಂದು ದಿವದೊಳ್|
     ನಿನ್ನ ಮನೋರಥಮನರಸ ನೆಱಪದೆ ಮಾಣೆಂ||೨೧|| 
(ನೀನ್ ನಿನ್ನ ಸಾವನ್ ಅದನ್ ಎನಸುಂ ನೆನೆಯದೆ ‘ನೆರೆವೆನ್’ ಎಂಬ ಬಗೆಯೊಳ್ ಬಂದೈ! ನಿನ್ನೊಡನೆ ವಂದು ದಿವದೊಳ್  ನಿನ್ನ ಮನೋರಥಮನ್ ಅರಸ ನೆಱಪದೆ ಮಾಣೆಂ)
ನೀನು ನಿನ್ನ ಸಾವನ್ನು ಸಹ ಲೆಕ್ಕಿಸದೆ, ನನ್ನನ್ನು ಸೇರುವ ಆಸೆಯಿಂದ ಬಂದೆಯಲ್ಲ! ನಿನ್ನೊಡನೆ ಬಂದು ಸ್ವರ್ಗದಲ್ಲಾದರೂ ನಿನ್ನ ಬಯಕೆಯನ್ನು ಪೂರೈಸದೆ ಬಿಡುವವಳಲ್ಲ ನಾನು!
    
ಕಂ|| ಉನ್ನತ ಧವಳಚ್ಛತ್ರ|
     ಚ್ಛನ್ನ ವಿಯತ್ತಳನನಿಂದುಕುಳತಿಳಕನನಿಂ||
     ತನ್ನೆಯದಿಂದೀ ಪೞುವಿನೊ|
     ಳೆನ್ನರಸನನಿಂತು ಬಿದಿಯೆ ತಂದಿಕ್ಕುವುದೇ||೨೨||
(ಉನ್ನತ ಧವಳಚ್ಛತ್ರಚ್ಛನ್ನ ವಿಯತ್ತಳನನ್, ಇಂದುಕುಳತಿಳಕನನ್, ಇಂತು ಅನ್ನೆಯದಿಂದ ಈ ಪೞುವಿನೊಳ್ ಎನ್ನರಸನನ್, ಇಂತು ಬಿದಿಯೆ, ತಂದು ಇಕ್ಕುವುದೇ?)
ವಿಧಿಯೇ! ಆಕಾಶವನ್ನೇ ವ್ಯಾಪಿಸಿದಂಥ ಬಿಳಿಯ ಕೊಡೆ ಇರುವ, ಚಂದ್ರವಂಶದ ತಿಲಕದಂತಿರುವ, ನನ್ನ ಪತಿಯಾಗಿರುವ (ಮಹಾನುಭಾವನಾದ) ಪಾಂಡುರಾಜನನ್ನು ನೀನು ಹೀಗೆ ಅನ್ಯಾಯವಾಗಿ ಈ ಕಾಡಿನಲ್ಲಿ ತಂದುಹಾಕಬಹುದೇ?  

ವ|| ಎಂದು ವನದೇವತೆಗಳ್ಗೆಲ್ಲಂ ಕರುಣಮಾಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳ್ದು ಭೋಂಕನೆರ್ದೆದೆಱೆದು- 
(ಎಂದು ವನದೇವತೆಗಳ್ಗೆಲ್ಲಂ ಕರುಣಂ ಆಗೆ ಪಳಯಿಸುವ ಮಾದ್ರಿಯ ಸರಮಂ ಕುಂತಿ ಕೇಳ್ದು ಭೋಂಕನೆ ಎರ್ದೆದೆಱೆದು)
ಎಂದು ವನದೇವತೆಗಳಿಗೆಲ್ಲ ಕರುಣೆ ಹುಟ್ಟುವಂತೆ ದುಃಖಿಸುತ್ತಿದ್ದ ಮಾದ್ರಿಯ ಸ್ವರವನ್ನು ಕುಂತಿ ಕೇಳಿ, ಎದೆ ಬಿರಿದು-

ಕಂ||ಆ ದೆಸೆಯೊಳ್ ಭೂಭುಜನೋ|
     ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಮಂ||
     ತಾ ದೆಸೆಯೊಳ್ ಭೂಪತಿಗೇ|
     ನಾದುದೊ ಪೇೞ್ ಬಿದಿಯೆ ಕೆಟ್ಟೆನೞಿದೆನೆನುತ್ತುಂ||೨೩||
(ಆ ದೆಸೆಯೊಳ್ ಭೂಭುಜನ್, ಓ, ಆ ದೆಸೆಯೊಳ್ ಮಾದ್ರಿ ನೆಗೆವ ಕರುಣಾರವಂ,  ಅಂತು ಆ ದೆಸೆಯೊಳ್ ಭೂಪತಿಗೆ ಏನಾದುದೊ? ಪೇೞ್ ಬಿದಿಯೆ! ಕೆಟ್ಟೆನ್! ಅೞಿದೆನ್! ಎನುತ್ತುಂ)
ಯಾವ ದಿಕ್ಕಿಗೆ ಪಾಂಡುವು ಹೋದನೋ ಆ ಕಡೆಯಿಂದಲೇ ಮಾದ್ರಿಯ ಅಳು ಜೋರಾಗಿ ಕೇಳುತ್ತಿದೆಯಲ್ಲ! ಪಾಂಡುವಿಗೆ ಏನಾಯಿತೋ ಏನೋ? ವಿಧಿಯೇ ಹೇಳು! (ನಾನು) ಕೆಟ್ಟೆ! ಸತ್ತೆ! 
    
ಕಂ| ಬೞಿಯನೆ ಮಕ್ಕಳ್ ಭೋರ್ಗರೆ|
     ದೞುತುಂ ಪೆಱ ಪೆಱಗನಂತೆ ಪರಿತರೆ ಮುಡಿ ಬಿ||
     ಟ್ಟೆೞಲೆ ನಡುನಡುಗೆ ಕಣ್ಣೀರ್|
     ಗೞಗೞನೊರ್ಮೊದಲೆ ಸುರಿಯೆ ಪರಿತಂದಾಗಳ್||೨೪|| 
(ಬೞಿಯನೆ ಮಕ್ಕಳ್ ಭೋರ್ಗರೆದು ಅೞುತುಂ ಪೆಱ ಪೆಱಗನಂತೆ ಪರಿತರೆ ಮುಡಿ ಬಿಟ್ಟು ಎೞಲೆ ನಡು ನಡುಗೆ ಕಣ್ಣೀರ್ ಗೞಗೞನೆ ಒರ್ಮೊದಲೆ ಸುರಿಯೆ ಪರಿತಂದು ಆಗಳ್)
ಜತೆಯಲ್ಲಿಯೇ ಮಕ್ಕಳೂ ಸಹ ಜೋರಾಗಿ ಅಳುತ್ತಾ ಓಡಿಬರುತ್ತಿರಲು, ತಲೆಗೂದಲು ಬಿಚ್ಚಿ ಜೋತಾಡುತ್ತಿರಲು, ಸೊಂಟ ನಡುಗುತ್ತಿರಲು, ಕಣ್ಣೀರು ಒಂದೇ ಸವನೆ ಸುರಿಯುತ್ತಿರಲು, ಕುಂತಿ ಅಲ್ಲಿಗೆ ಓಡೋಡಿ ಬಂದಾಗ

ವ|| ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುಲಿಯುತ್ತುಮಿರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ- 
(ಅಂತು ತನ್ನ ನಲ್ಲನ ಕಳೇವರಮಂ ತೞ್ಕೈಸಿಕೊಂಡು, ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುಲಿಯುತ್ತುಂ ಇರ್ದ ಮಾದ್ರಿಯಂ ಕಂಡು, ಕುಂತಿ ನೆಲದೊಳ್ ಮೆಯ್ಯನ್ ಈಡಾಡಿ, ನಾಡಾಡಿಯಲ್ಲದೆ ಪಳಯಿಸಿ)
ಹಾಗೆ ತನ್ನ ನಲ್ಲನ ಶವವನ್ನು ತಬ್ಬಿಕೊಂಡು, ಅವನೊಂದಿಗೆ ತಾನು ಸಾಯುವುದನ್ನು ನಿಶ್ಚಯಿಸಿಕೊಂಡು, ಹಲ್ಲು ಕಚ್ಚಿಹಿಡಿದಿದ್ದ ಮಾದ್ರಿಯನ್ನು ಕಂಡು ಕುಂತಿಯು ಅಲ್ಲಿಯೇ ನೆಲದ ಮೇಲೆ ಬಿದ್ದು ಹೊರಳಾಡಿ, ಜೋರಾಗಿ ಅತ್ತು

ಕಂ| ಅಡವಿಯೊಳೆನ್ನುಮನೆನ್ನೀ|
     ನಡಪಿದ ಶಿಶುಗಳುಮನಿರಿಸಿ ನೀಂ ಪೇೞದೆ ಪೋ||
     ದೊಡಮೇನೋ ನಿನ್ನ ಬೞಯನೆ|
     ನಡೆತರ್ಪೆಂ ನಿನ್ನರಸ ಬಿಸುಟೆಂತಿರ್ಪೆಂ||೨೫|| 
(ಅಡವಿಯೊಳ್ ಎನ್ನುಮನ್ ಎನ್ನೀ ನಡಪಿದ ಶಿಶುಗಳುಮನ್ ಇರಿಸಿ, ನೀಂ ಪೇೞದೆ ಪೋದೊಡಂ ಏನೋ? ನಿನ್ನ ಬೞಯನೆ ನಡೆತರ್ಪೆಂ ನಿನ್ ಅರಸ ಬಿಸುಟು ಎಂತಿರ್ಪೆಂ)
ಕಾಡಿನಲ್ಲಿ ನನ್ನನ್ನೂ, ನಾನು ಸಾಕಿದ ಈ ಮಕ್ಕಳನ್ನೂ, ನೀನು ಹೇಳದೆಯೇ ಬಿಟ್ಟು ಹೋದರೆ ತಾನೆ ಏನು? ನಾನು ನಿನ್ನ ಜೊತೆಗೇ ಬರುತ್ತೇನೆ! ನಿನ್ನನ್ನು ಬಿಟ್ಟು ನಾನು ಹೇಗೆ ತಾನೇ ಇರಲಿ?

ವ|| ಎಂದು ನೀನೀ ಕೂಸುಗಳಂ ಕೈಕೊಂಡು ನಡಪು ನಲ್ಲನನೆನಗೊಪ್ಪಿಸಾನಾತನಾದುದನಪ್ಪೆನೆನೆ ಮಾದ್ರಿಯಿಂತೆಂದಳ್- 
(ಎಂದು, ನೀನ್ ಈ ಕೂಸುಗಳಂ ಕೈಕೊಂಡು ನಡಪು, ನಲ್ಲನನ್ ಎನಗೊಪ್ಪಿಸು, ಆನ್ ಆತನ್ ಆದುದನ್ ಅಪ್ಪೆನ್ ಎನೆ ಮಾದ್ರಿಯಿಂತೆಂದಳ್)
ಎಂದು, ‘ನೀನು ಈ ಕೂಸುಗಳನ್ನು ಕೈಹಿಡಿದು ಸಾಕು. ನಲ್ಲನನ್ನು ನನಗೆ ಒಪ್ಪಿಸು. ನಾನು ಆತನಾದಂತೆಯೇ ಆಗುತ್ತೇನೆ’ ಎನ್ನಲು ಮಾದ್ರಿಯು ಹೀಗೆಂದಳು:
ಕಂ|| ಎನಗಿಂದಿನೊಂದು ಸೂೞುಮ|
     ನಿನಿಯಂ ದಯೆಗೆಯ್ದನೆನ್ನ ಸೂೞಂ ನಿನಗಾ||
     ನೆನಿತಾದೊಡಮೀವೆನೆ ಮ|
     ತ್ತನಯರ್ ಕೆಯ್ಯೆಡೆ ಪಲುಂಬದಿರ್ ಪೆಱಪೆಱವಂ||೨೬|| 
(ಎನಗೆ ಇಂದಿನ ಒಂದು ಸೂೞುಮನ್ ಇನಿಯಂ ದಯೆಗೆಯ್ದನ್, ಎನ್ನ ಸೂೞಂ ನಿನಗೆ ಆನ್ ಎನಿತು ಆದೊಡಂ ಈವೆನೆ? ಮತ್ತನಯರ್ ಕೆಯ್ಯೆಡೆ, ಪಲುಂಬದಿರ್ ಪೆಱಪೆಱವಂ)
ಈ ದಿನದ ಒಂದು ಸರದಿಯನ್ನು ಇನಿಯನು ನನಗೆ ಕರುಣಿಸಿದ್ದಾನೆ. ಆ ಸರದಿಯನ್ನು ನಿನಗೆ ಎಂದಾದರೂ ಬಿಟ್ಟು ಕೊಡುತ್ತೇನೆಯೆ? ಇಗೋ! ಈ ನನ್ನ ಮಕ್ಕಳನ್ನು ನಿನ್ನ ಕೈಗೆ ಹಾಕಿದ್ದೇನೆ. ಸುಮ್ಮನೆ ಬೇರೇನನ್ನೋ ಹಲುಬಬೇಡ!

ವ|| ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನಣ್ಮಂ ಪೊಗೞೆ ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ  ಕಿರ್ಚಿಂಗೆ ಕುಲದೊಳಂ ಚಲದೊಳಮಾ[ವ] ಕಂದುಂ ಕುಂದುಮಿಲ್ಲದೆ ತನ್ನೊರೆಗಂ ದೊರೆಗಮಾರುಮಿಲ್ಲೆನಿಸಿದಾಗಳ್ ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯನಿಂತೆಂದು ಸಂತೈಸಿದರ್-
(ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನ ಅಣ್ಮಂ ಪೊಗೞೆ, ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ  ಕಿರ್ಚಿಂಗೆ ಕುಲದೊಳಂ ಚಲದೊಳಂ ಆ[ವ] ಕಂದುಂ ಕುಂದುಂ ಇಲ್ಲದೆ ತನ್ನ ಒರೆಗಂ ದೊರೆಗಂ ಆರುಂ ಇಲ್ಲ ಎನಿಸಿದಾಗಳ್, ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರ್ ಆ ಕಾಂತೆಯನ್ ಇಂತೆಂದು ಸಂತೈಸಿದರ್-) 
ಎಂದು ಆ ತಪೋವನದ ಮುನಿಜನರೂ, ವನದೇವತೆಗಳೂ ತನ್ನ ಸಾಹಸವನ್ನು ಹೊಗಳಲು (ಮಾದ್ರಿಯು ಪಾಂಡುವಿನೊಡನೆ ಸಹಗಮನ ಮಾಡಿದಳು.) ಹೀಗೆ ಕುಲದಲ್ಲಿಯೂ, ಚಲದಲ್ಲಿಯೂ ಯಾವ ಕಂದೂ, ಕುಂದೂ ಇಲ್ಲದ ಮಾದ್ರಿಗೆ ಸಮಾನರೇ ಇಲ್ಲದಂತಾಯಿತು. ಇತ್ತ ತುಂಬಾ ದುಃಖಿತಳಾದ ಕುಂತಿಯನ್ನು ತಪೋವನದ  ತಪಸ್ವಿಗಳಾದ ವೃದ್ಧರು ಹೀಗೆ ಸಂತೈಸಿದರು.

ಚಂ|| ಕೞಿದವರ್ಗೞ್ವುದೞ್ತೊಡವರೇೞ್ವೊಡಮಂತವರಿಂ ಬೞಿಕ್ಕೆ ತಾ|
     ಮುೞಿವೊಡಮೇೞರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ||
     ಗೞಿಯಿಸಿಕೊಳ್ವುದೊಂದೆ ಚದುರಿಂತುಟು ಸಂಸ್ಕೃತಿ ಧರ್ಮಮೇಕೆ ಬಾ|
     ಯೞಿವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ||೨೭|| 
(ಕೞಿದವರ್ಗೆ ಅೞ್ವುದು ಅೞ್ತೊಡೆ ಅವರ್ ಏೞ್ವೊಡಂ, ಅಂತು ಅವರಿಂ ಬೞಿಕ್ಕೆ ತಾಂ ಉೞಿವೊಡಂ! ಏೞರ್ ಅಂತು ಅವರ್ ಅಣಂ, ತಮಗಂ ಬರ್ದುಕಿಲ್ಲ! ಧರ್ಮಮಂ ಗೞಿಯಿಸಿಕೊಳ್ವುದೊಂದೆ ಚದುರು! ಇಂತುಟು ಸಂಸ್ಕೃತಿ ಧರ್ಮಂ, ಏಕೆ ಬಾಯೞಿವುದು? ಇದೇಕೆ ಚಿಂತಿಸುವುದು? ಏಕೆ ಪಲುಂಬುವುದು? ಏಕೆ ನೋವುದೋ?)
ಸತ್ತವರು ಮತ್ತೆ ಮೇಲೆದ್ದು ಬರುವುದಾದರೆ ಅವರಿಗಾಗಿ ಅಳಬಹುದು! ಅವರ ಬಳಿಕ ನಾವಾದರೂ ಉಳಿಯುವುದುಂಟೆ? ಸತ್ತವರಂತೂ ಏಳುವುದಿಲ್ಲ! ಅವರಿಗಾಗಿ ಅತ್ತವರಿಗೂ ಮುಂದೆ ಉಳಿವಿಲ್ಲ! (ವಸ್ತುಸ್ಥಿತಿ ಹೀಗಿರುವಾಗ, ಬದುಕಿನಲ್ಲಿ) ಧರ್ಮವನ್ನು ಗಳಿಸಿಕೊಳ್ಳುವುದೊಂದೇ ಬುದ್ಧಿವಂತಿಕೆ!  ಇದೇ ನಿಜವಾದ ಸಂಸ್ಕೃತಿ! ನಡೆಯಬೇಕಾದ ರೀತಿ! (ಅದು ಬಿಟ್ಟು) ಅಳುವುದೇಕೆ? ಚಿಂತಿಸುವುದೇಕೆ?  ಹಲುಬುವುದೇಕೆ? ನೋಯುವುದೇಕೆ?

ವ|| ಅಂತುಮಲ್ಲದೆ- 

ಕಂ|| ಬಿಡದೞಲ್ವ ಬಂಧುಜನದೊ|
     ೞ್ಕುಡಿಯದ ಕಣ್ಣೀರ ಪೂರಮಾ ಪ್ರೇತಮನೋ||
     ಗಡಿಸದೆ ಸುಡುವುದು ಗಡಮಿ|
     ನ್ನುಡುಗುವುದೀ ಶೋಕಮಂ ಸರೋಜದಳಾಕ್ಷೀ||೨೮||
(ಬಿಡದೆ ಅೞಲ್ವ ಬಂಧುಜನದ ಒೞ್ಕುಡಿಯದ ಕಣ್ಣೀರ ಪೂರಂ ಆ ಪ್ರೇತಮನ್ ಓಗಡಿಸದೆ ಸುಡುವುದು ಗಡಂ! ಇನ್ ಉಡುಗುವುದು ಈ ಶೋಕಮಂ ಸರೋಜದಳಾಕ್ಷೀ)
ಬಿಡದೆ ಅಳುವ ನೆಂಟರಿಷ್ಟರ ಕಣ್ಣೀರ ಹೊನಲು (ಸತ್ತವರ) ಪ್ರೇತವನ್ನು ಅಸಹ್ಯಪಡದೆ ಸುಡುವುದಂತೆ! ಹಾಗಾಗಿ ಈಗಲಾದರೂ ನಿನ್ನ ದುಃಖವನ್ನು ಕಡಿಮೆ ಮಾಡಿಕೋ! 

ವ| ನೀನಿಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನಱಿಯದಜ್ಞಾನಿಗಳಂತೆ ವಿಪ್ರಳಾಪಂಗೆಯ್ದೆಯಪ್ಪೊಡೀ ಕೂಸುಗಳ್ ಮನಮಿಕ್ಕಿಯುಮೆರ್ದೆಯಿಕ್ಕಿಯುಂ ಕಿಡುವರೆಂದನೇಕೋಪಶಾಂತವಚನಂಗಳಿಂದಮಾಕೆಯುಬ್ಬೆಗಮನಾಱಿ ನುಡಿದುಮಲ್ಲಿಯ ಮುನಿಜನಮೆಲ್ಲಮಾ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟೊಡಗೊಂಡು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಮಂಬಾಲೆಗಂ ಪಾಂಡುರಾಜನ ವೃತ್ತಾಂತಮನಱಿಪಿದೊಡಾಗಳ್- 
(ನೀನ್ ಇಂತು ಶೋಕಾಕ್ರಾಂತೆಯಾಗಿ ಸಂಸಾರಸ್ಥಿತಿಯನ್ ಅಱಿಯದ ಅಜ್ಞಾನಿಗಳಂತೆ ವಿಪ್ರಳಾಪಂ ಗೆಯ್ದೆಯಪ್ಪೊಡೆ, ಈ ಕೂಸುಗಳ್ ಮನಮಿಕ್ಕಿಯುಂ ಎರ್ದೆಯಿಕ್ಕಿಯುಂ ಕಿಡುವರ್  ಎಂದು ಅನೇಕ ಉಪಶಾಂತ ವಚನಂಗಳಿಂದಂ ಆಕೆಯ ಉಬ್ಬೆಗಮನ್ ಆಱಿ ನುಡಿದುಂ, ಅಲ್ಲಿಯ ಮುನಿಜನಮೆಲ್ಲಂ ಆ ಕೂಸುಗಳುಮಂ ಕುಂತಿಯುಮಂ ಮುಂದಿಟ್ಟು ಒಡಗೊಂಡು, ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಳ್ಗಂ ಅಂಬಾಲೆಗಂ ಪಾಂಡುರಾಜನ ವೃತ್ತಾಂತಮನ್ ಅಱಿಪಿದೊಡೆ ಆಗಳ್- )
ನೀನು ಹೀಗೆ ದುಃಖಿತಳಾಗಿ, ಲೌಕಿಕ ಸಂಸಾರದ ನಿಜವನ್ನು ಅರ್ಥ ಮಾಡಿಕೊಳ್ಳದೆ, ಮತ್ತೆ ಮತ್ತೆ ಅಳುತ್ತಿದ್ದರೆ ಈ ಮಕ್ಕಳ ಮನಸ್ಸು ಕುಗ್ಗುತ್ತದೆ, ಅವರು ಧೈರ್ಯಗೆಡುತ್ತಾರೆ – ಎಂದು ಅನೇಕ ಸಮಾಧಾನದ ಮಾತುಗಳಿಂದ ಅವಳ ವ್ಯಸನವು ಕಡಿಮೆಯಾಗುವಂತೆ ತಿಳಿಹೇಳಿದರು. ನಂತರ ಅಲ್ಲಿಯ ಮುನಿಜನರೆಲ್ಲರೂ ಚಿಕ್ಕ ಮಕ್ಕಳನ್ನೂ, ಕುಂತಿಯನ್ನೂ ಮುಂದಿಟ್ಟುಕೊಂಡು, ಅವರೊಂದಿಗೆ ಹಸ್ತಿನಾವತಿಗೆ ಬಂದು ಗಾಂಗೇಯ, ಧೃತರಾಷ್ಟ್ರ, ವಿದುರರಿಗೂ, ಅಂಬಾಲೆಗೂ ಪಾಂಡುರಾಜನ ಸಮಾಚಾರವನ್ನು ಹೇಳಿದಾಗ –

ಕಂ|| ತುಱುಗಿದ ಹಿಮಬಿಂದುಗಳಿಂ|
     ದೆಱಗಿದ ನವ ವನಜವನದವೋಲ್ ಶೋಕದಿನಂ||
     ದೊಱೆವ ನಯನೋದಬಿಂದುವಿ|
     ನೆಱಗಿದುದೊರ್ಮೊದಲೆ ಬಂಧುಮುಖ ವನಜವನಂ||೨೯|| 
(ತುಱುಗಿದ ಹಿಮಬಿಂದುಗಳಿಂದ ಎಱಗಿದ ನವ ವನಜವನದವೋಲ್, ಶೋಕದಿನ್ ಅಂದು ಒಱೆವ ನಯನೋದಬಿಂದುವಿನ್, ಎಱಗಿದುದು ಒರ್ಮೊದಲೆ ಬಂಧುಮುಖ ವನಜವನಂ)
ಹೊಸತಾಗಿ ಅರಳಿ ನಿಂತ ತಾವರೆಯ ವನದ ಮೇಲೆ ದಟ್ಟವಾದ ಮಂಜಿನ ಹನಿಗಳು ಬಿದ್ದಾಗ ಅವು ಹೇಗೆ ಬಗ್ಗುತ್ತವೆಯೋ ಹಾಗೆ, ದುಃಖದಿಂದ ಸುರಿಯುವ ಕಣ್ಣೀರ ಹನಿಗಳಿಂದ (ಪಾಂಡುವಿನ) ಬಂಧುಗಳೆಲ್ಲರ ಮುಖಗಳು ಒಟ್ಟಿಗೆ ಬಗ್ಗಿದವು.
ವ|| ಆಗಳ್ ಪುತ್ರ ಸ್ನೇಹದಿಂದತಿ ಪ್ರಳಾಪಂಗೆಯ್ವಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ ಬಾಯೞಿದು ಪಳಯಿಸುವ ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ ಜಳದಾನಾದಿಕ್ರಿಯೆಗಳಂ ನಿರ್ವರ್ತಿಸಿ ತದನಂತರದೊಳದುವೆ ನಿರ್ವೇಗಮಾಗೆ ವ್ಯಾಸವಚನದೊಳ್ ಸತ್ಯವತಿಯುಮಂಬಿಕೆಯುಮಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನಾಶ್ರಯಿಸಿದರಿತ್ತ ಗಾಂಗೇಯನಯ್ವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಲಾಗಿ ನಡುಪುತ್ತುಮಿರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳಯ್ವರುಂ ಸಹಪಾಂಸುಕ್ರೀಡಿತರಾಗಿ- 
(ಆಗಳ್ ಪುತ್ರ ಸ್ನೇಹದಿಂದ ಅತಿ ಪ್ರಳಾಪಂಗೆಯ್ವ ಅಂಬಾಲೆಯುಮಂ, ಬಂಧುಜನ ನಿರೀಕ್ಷಣದಿಂ ಶೋಕಂ ಮಱುಕಣಿಸೆ ಬಾಯೞಿದು ಪಳಯಿಸುವ ಕುಂತಿಯುಮಂ, ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ, ಸತ್ಯವತೀದೇವಿಯುಮಂ ಸಂತೈಸಿ, ಪಾಂಡುರಾಜಂಗೆ ಜಳದಾನಾದಿಕ್ರಿಯೆಗಳಂ ನಿರ್ವರ್ತಿಸಿ ತದನಂತರದೊಳ್ ಅದುವೆ ನಿರ್ವೇಗಮಾಗೆ ವ್ಯಾಸವಚನದೊಳ್ ಸತ್ಯವತಿಯುಂ ಅಂಬಿಕೆಯುಂ ಅಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನ್ ಆಶ್ರಯಿಸಿದರ್. ಇತ್ತ ಗಾಂಗೇಯನ್ ಅಯ್ವರ್ ಕೂಸುಗಳುಮಂ ತನ್ನ ತೊಡೆಯೆ ತೊಟ್ಟಲಾಗಿ ನಡುಪುತ್ತುಂ ಇರೆ ದುರ್ಯೋಧನ ಪ್ರಭೃತಿಗಳ್ ನೂರ್ವರುಂ ಧರ್ಮಪುತ್ರಾದಿಗಳ್ ಅಯ್ವರುಂ ಸಹಪಾಂಸುಕ್ರೀಡಿತರಾಗಿ- )
ಆಗ, ಮಗನ ಮೇಲಿನ ಮಮತೆಯ ಕಾರಣವಾಗಿ ತೀವ್ರವಾಗಿ ದುಃಖಿಸುತ್ತಿದ್ದ ಅಂಬಾಲೆಯನ್ನೂ, ಬಂಧುಗಳನ್ನು ಕಂಡಕೂಡಲೇ ದುಃಖ ಮರುಕಳಿಸಿ ಬಾಯಿ ತೆಗೆದು ಅಳುತ್ತಿದ್ದ ಕುಂತಿಯನ್ನೂ, ಗಾಂಗೇಯ, ಧೃತರಾಷ್ಟ್ರ, ವಿದುರರನ್ನೂ, ಸತ್ಯವತೀ ದೇವಿಯನ್ನೂ ಸಂತೈಸಿ, ಪಾಂಡುವಿಗೆ ತರ್ಪಣ ಕೊಡುವುದೇ ಮುಂತಾದ ಕ್ರಿಯೆಗಳನ್ನು (ಮುನಿಜನರು) ನಡೆಸಿದರು. ನಂತರ ಅದೇ ಕಾರಣದಿಂದ ವೈರಾಗ್ಯ ಹುಟ್ಟಿ, ವ್ಯಾಸನ ಮಾತಿನಂತೆ ಸತ್ಯವತಿ, ಅಂಬಿಕೆ, ಅಂಬಾಲಿಕೆಯರು ಮುನಿವನವನ್ನು ಸೇರಿದರು. ಇತ್ತ ಭೀಷ್ಮನು ಐವರು ಮಕ್ಕಳನ್ನು ಸಹ ತನ್ನ ತೊಡೆಯನ್ನೇ ತೊಟ್ಟಿಲಾಗಿಸಿ ಸಾಕುತ್ತಿದ್ದನು. ದುರ್ಯೋಧನನೇ ಮೊದಲಾದ ನೂರು ಮಂದಿ ಕೌರವರೂ, ಪಂಚಪಾಂಡವರೂ ಮಣ್ಣಿನಲ್ಲಿ ಒಟ್ಟಿಗೆ ಆಟವಾಡಿ-
ದಿನಾಂಕ ೨೮-೦೭-೨೦೨೦ರಂದು ಮಾಡಿದ ತಿದ್ದುಪಡಿ:
೨೭ನೆಯ ಪದ್ಯದಲ್ಲಿ ಬಂದಿರುವ ʼಇಂತುಟು ಸಂಸ್ಕೃತಿ ಧರ್ಮಂʼ ಎಂಬ ಮಾತಿನ ʼಸಂಸ್ಕೃತಿʼ ಪದದ ಬಗ್ಗೆ: ʼಪಂಪಭಾರತʼದ ಮೈಸೂರು ವಿ.ವಿ.ದ ಪ್ರಕಟಣೆಯಲ್ಲೂ, ಡಿ ಎಲ್‌ ಎನ್‌ ಅವರ ʼಪಂಪಭಾರತ ದೀಪಿಕೆʼಯಲ್ಲೂ, ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ, ಪ್ರೊ. ಶಿವರಾಮಯ್ಯನವರ ʼಪಂಪಭಾರತʼದಲ್ಲೂ ʼಸಂಸ್ಕೃತಿʼ ಎಂದು ಇದೆ. ಆದರೆ ಹಂಪಿ ಕನ್ನಡ ವಿ.ವಿ.ದ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿಯವರು ಸಂಪಾದಿಸಿರುವ ʼಪಂಪಭಾರತʼದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಎನ್.‌ ಅನಂತರಂಗಾಚಾರ್‌ ಅವರ ʼಪಂಪಭಾರತಂʼನಲ್ಲಿ ʼಸಂಸೃತಿʼ ಎಂಬ ಪದ ಇದೆ. ಡಾ. ಪಿ.ವಿ.ನಾರಾಯಣ ಅವರ ಪಂಪನ ಕೃತಿಗಳ ಶಬ್ದಕೋಶ ʼಪಂಪನ ನುಡಿಗಣಿʼಯಲ್ಲಿ ʼಸಂಸೃತಿʼ ಪದಕ್ಕೆ ʼಸಂಸಾರʼ ಎಂದು ಅರ್ಥ ಕೊಟ್ಟಿದ್ದಾರೆ. ಇಡೀ ಪದ್ಯದ ಆಶಯವನ್ನು ಪರಿಗಣಿಸಿದರೆ ʼಸಂಸೃತಿʼ ಎಂಬ ಪದವೇ ಇಲ್ಲಿ ಹೆಚ್ಚು ಸೂಕ್ತವೆಂದು ಹೇಳಬಹುದು. ಹೀಗಾಗಿ ʼಇಂತುಟು ಸಂ‍ಸೃತಿ ಧರ್ಮಂʼ ಎಂದರೆ ʼಇದು ಸಂಸಾರದ ರೀತಿʼ ಎಂದು ಅರ್ಥ ಮಾಡಬಹುದು.